ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ಗೆ ಆಶ್ಡೆನ್ ಪ್ರಶಸ್ತಿ

ಉಡುಪಿ: ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್ಗೆ ಪ್ರತಿಷ್ಠಿತ ಆಶ್ಡೆನ್ ಪ್ರಶಸ್ತಿ ದೊರೆತಿದೆ. ಈಚೆಗೆ ಲಂಡನ್ನ ಗ್ಲಾಸ್ಗೋದಲ್ಲಿ ನಡೆದ ಸಮಾರಂಭದಲ್ಲಿ ಬಿವಿಟಿ ಮಾಸ್ಟರ್ ತರಬೇತುದಾರ ಸುಧೀರ್ ಕುಲಕರ್ಣಿ ಹಾಗೂ ಸುದೀಫ್ತ್ ಘೋಷ್ ಪ್ರಶಸ್ತಿ ಸ್ವೀಕರಿಸಿದರು.
ಹವಾಮಾನ ಬದಲಾವಣೆಯ ತೀವ್ರತೆ ತಗ್ಗಿಸುವ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳಿಗೆ ಆಶ್ಡೆನ್ ಪ್ರಶಸ್ತಿ ನೀಡಲಾಗುತ್ತಿದ್ದು, ಸುಸ್ಥಿರ ಶಕ್ತಿಯ ಕೌಶಲ ವೃದ್ಧಿ ಕ್ಷೇತ್ರಕ್ಕೆ ಬಿವಿಟಿ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಟಿ.ಅಶೋಕ್ ಪೈ ತಿಳಿಸಿದ್ದಾರೆ.
ಪ್ರಶಸ್ತಿಗಾಗಿ ವಿವಿಧ ದೇಶಗಳ 800ಕ್ಕೂ ಹೆಚ್ಚು ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದವು. ಅವುಗಳ ಪೈಕಿ ಭಾರತದ 2 ಸಂಸ್ಥೆಗಳಿಗೆ ಪ್ರಶಸ್ತಿ ಲಭಿಸಿದ್ದು, ಮಣಿಪಾಲದ ಬಿವಿಟಿ ಕೂಡ ಒಂದಾಗಿದೆ. ಜಾಗತಿಕ ಮಟ್ಟದಲ್ಲಿ ಸುಸ್ಥಿರ ಕೌಶಲ ವೃದ್ಧಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುಂಚೂಣಿ ಸಂಸ್ಥೆಗಳ ಜೊತೆಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವ ಹಾಗೂ ಸಹಭಾಗಿತ್ವದ ಅವಕಾಶ ಸಂಸ್ಥೆಗೆ ಲಭಿಸಿದೆ.
1978ರಲ್ಲಿ ಆರಂಭವಾದ ಬಿವಿಟಿ ಸ್ವಯಂ ಸೇವಾ ಸಂಸ್ಥೆಯಾಗಿದ್ದು ಮಾನವ ಸಂಪನ್ಮೂಲ ಅಭಿವೃದ್ಧಿಯ ಜತೆಗೆ ಸ್ವ ಉದ್ಯೋಗಕ್ಕೆ ಒತ್ತು ನೀಡುತ್ತಿದೆ. ಮಹಿಳಾ ಸಬಲೀಕರಣ, ನವೀಕರಿಸಬಹುದಾದ ಇಂಧನ-ಹಣಕಾಸು ಸಂಸ್ಥೆಗಳು, ಯಶಸ್ವಿ ಗ್ರಾಮೀಣ ಆಡಳಿತ ನಿರ್ವಹಣೆ ಹಾಗೂ ಸುಸ್ಥಿರ ಕೃಷಿ ಕ್ಷೇತ್ರದಲ್ಲಿ ಬಿವಿಟಿಯು ಅರ್ಹರಿಗೆ ತರಬೇತಿ ನೀಡುತ್ತಿದೆ ಎಂದು ಅಶೋಕ್ ಪೈ ಮಾಹಿತಿ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.