ಉಡುಪಿ: ಪೆರ್ಡೂರು ಗ್ರಾಮದ ಜೋಗಿಬೆಟ್ಟು ಬಳಿ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಹರಾವರಿಯ ವಿಜಯ್ ಕುಮಾರ್, ಎನ್ಆರ್ ಪುರ ತಾಲ್ಲೂಕಿನ ಎಸ್.ವಿ.ನಿಕ್ಷೇಪ್ ಹಾಗೂ ಕೊಪ್ಪ ತಾಲ್ಲೂಕಿನ ಗುಣವಂತೆ ಗ್ರಾಮದ ನಿತೇಶ್ ಕುಮಾರ್ ಬಂಧಿತರು. ಆರೋಪಿಗಳಿಂದ ₹ 6.9 ಲಕ್ಷ ಮೌಲ್ಯದ 20 ಕೆ.ಜಿ 614 ಗ್ರಾಂ ಗಾಂಜಾ ಹಾಗೂಮೂರು ಮೊಬೈಲ್, ಕಾರು, ₹ 6000 ಸೇರಿ ₹ 15.30 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚಿಕ್ಕಮಗಳೂರಿನಿಂದ ಉಡುಪಿಗೆ ಗಾಂಜಾ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸೆನ್ ಅಪರಾಧ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಕಾರ್ಯಾಚರಣೆಯಲ್ಲಿ ಸೆನ್ ಠಾಣೆಯ ಎಎಸ್ಐ ಕೇಶವ ಗೌಡ, ಸಿಬ್ಬಂದಿ ನಾಗೇಶ, ರಾಘವೇಂದ್ರ ಬ್ರಹ್ಮಾವರ, ಕೃಷ್ಣಪ್ರಸಾದ್, ಪ್ರವೀಣ್, ಜೀವನ್, ಪ್ರಶಾಂತ, ನಿಲೇಶ್, ದೀಕ್ಷಿತ್, ಮಾಯಪ್ಪ, ಚಾಲಕ ನವೀನ್ ಚಂದ್ರ ಮತ್ತು ತಾಂತ್ರಿಕ ವಿಭಾಗದ ದಿನೇಶ್ ಇದ್ದರು.