ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದ್ದು ಹೆಬ್ರಿಯ ಸಿದ್ದಾಪುರ ರಾಜ್ಯ ಹೆದ್ದಾರಿಯ ಮದಗ ಬಳಿ ಕೃತಕ ನೆರೆ ಉಂಟಾಗಿ ಸಂಚಾರಕ್ಕೆ ಅಡ್ಡಿಯಾಗಿತ್ತು. ಗ್ರಾಮ ಪಂಚಾಯಿತಿಯಿಂದ ಜೆಸಿಬಿ ಮೂಲಕ ನೆರೆ ನೀರು ಹರಿದುಹೋಗುವಂತೆ ಮಾಡಲಾಯಿತು.
ಹೆಬ್ರಿಯ ಕುಚ್ಚೂರು, ಮುನಿಯಾಲು ಮಾತಿಬೆಟ್ಟಿನಲ್ಲಿ ಗದ್ದೆಗಳು ಜಲಾವೃತಗೊಂಡು ಭತ್ತದ ಕೃಷಿ ಹಾಳಾಗಿದೆ. ಶಿವಪುರದಲ್ಲಿ ಅಡಿಕೆ ತೋಟಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಕುಚ್ಚೂರಿನಲ್ಲಿ 21.4 ಸೆಂ.ಮೀ ಮಳೆಯಾಗಿದೆ.
ಉಡುಪಿಯ ಮೂಡನಿಡಂಬೂರಿನಲ್ಲಿ ದೈವದ ಗರೋಡಿಗೆ ನೀರು ನುಗ್ಗಿದ್ದು, ಸುತ್ತಮುತ್ತಲಿನ ಮನೆಗಳು ಜಲಾವೃತಗೊಂಡಿವೆ. ಬೈಲಕೆರೆ, ಮಠದಬೆಟ್ಟು ಪ್ರದೇಶಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿತ್ತು.
ಬೈಂದೂರು ತಾಲ್ಲೂಕಿನ ಶಿರೂರು, ಪಡುವರಿ, ತಾರಾಪತಿ, ಕೊಡೇರಿ, ಮರವಂತೆಯಲ್ಲಿ ಕಡಲ್ಕೊರೆತ ಉಂಟಾಗಿದೆ. ಕೊಲ್ಲೂರು, ಗೋಳಿಹೊಳೆ, ಗಂಗಾನಾಡು, ಕಾಲ್ತೋಡು, ಹೇರೂರು, ಬಡಾಕೆರೆಯಲ್ಲಿ ಕೃತ ನೆರೆ ಬಂದಿದೆ.