ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್: ವಕೀಲರ ಜತೆ ಚರ್ಚಿಸಿ ಮೇಲ್ಮನವಿ ಬಗ್ಗೆ ನಿರ್ಧಾರ– ವಿದ್ಯಾರ್ಥಿನಿಯರು

ನಿರೀಕ್ಷೆ ಹುಸಿಗೊಳಿಸಿದ ಹೈಕೋರ್ಟ್: ಕಾನೂನು ಹೋರಾಟ
Last Updated 15 ಮಾರ್ಚ್ 2022, 14:45 IST
ಅಕ್ಷರ ಗಾತ್ರ

ಉಡುಪಿ: ಹೈಕೋರ್ಟ್‌ನಲ್ಲಿ ಹಿಜಾಬ್ ಪರವಾಗಿ ತೀರ್ಪು ಬರಬಹುದು ಎಂಬ ನಿರೀಕ್ಷೆ ಹುಸಿಯಾಗಿದ್ದು, ಸಂವಿಧಾನಬದ್ಧ ಹಕ್ಕನ್ನು ತಿರಸ್ಕರಿಸಲಾಗಿದೆ ಎಂದು ಹಿಜಾಬ್ ಪರವಾಗಿ ಕಾನೂನು ಹೋರಾಟ ನಡೆಸುತ್ತಿರುವ ವಿದ್ಯಾರ್ಥಿನಿಯರು ಬೇಸರ ವ್ಯಕ್ತಪಡಿಸಿದರು.

ಮಂಗಳವಾರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿನಿಯರು, ಹಿಜಾಬ್‌ಗಾಗಿ ಕಾನೂನು ಹೋರಾಟ ಮುಂದುವರಿಯಲಿದೆ. ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ವಕೀಲರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

‘ಹಿಜಾಬ್‌ ಅಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ನ್ಯಾಯಾಲಯ ಹೇಳಿದೆ. ಆದರೆ, ಖುರಾನ್‌ನಲ್ಲಿ ಪ್ರತಿ ಮುಸ್ಲಿಂ ಮಹಿಳೆಯು ಕಡ್ಡಾಯವಾಗಿ ತಲೆ ಹಾಗೂ ಎದೆಯ ಭಾಗವನ್ನು ಸಂಪೂರ್ಣವಾಗಿ ಮುಚ್ಚಬೇಕು ಎಂದು ಹೇಳಲಾಗಿದೆ. ಹಿಜಾಬ್ ನಮ್ಮ ಧಾರ್ಮಿಕ ಹಕ್ಕಾಗಿದ್ದು, ಯಾವುದೇ ಕಾರಣಕ್ಕೂ ಮೊಟಕುಗೊಳಿಸಲು ಬಿಡುವುದಿಲ್ಲ. ಹಿಜಾಬ್ ಧರಿಸಲು ಅವಕಾಶ ನೀಡದಿದ್ದರೆ ಕಾಲೇಜಿಗೆ ಹೋಗುವುದಿಲ್ಲ. ನಮಗೆ ಶಿಕ್ಷಣವೂ ಬೇಕು, ಹಿಜಾಬ್ ಕೂಡ ಬೇಕು. ಎಂದು ವಿದ್ಯಾರ್ಥಿನಿ ಆಲ್ಮಾಸ್‌ ಹೇಳಿದರು.

ಕಾಲೇಜು ಹಂತದಲ್ಲೇ ಬಗೆಹರಿಸಬಹುದಾಗಿದ್ದ ಹಿಜಾಬ್ ವಿವಾದವನ್ನು ರಾಜಕೀಯಗೊಳಿಸಿ ಕೋಮು ಬಣ್ಣ ನೀಡಲಾಗಿದೆ. ಹೈಕೋರ್ಟ್ ಆದೇಶದಿಂದ ಸಾವಿರಾರು ಮುಸ್ಲಿಂ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಜಾತ್ಯತೀತ ರಾಷ್ಟ್ರದಲ್ಲಿ ಸಂವಿಧಾನವು ಪ್ರತಿಯೊಬ್ಬರಿಗೂ ಧಾರ್ಮಿಕ ಹಾಗೂ ಶೈಕ್ಷಣಿಕ ಹಕ್ಕುಗಳನ್ನು ನೀಡಿದೆ. ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ ಬದುಕಿದ್ದರೆ ಸಂವಿಧಾನಕ್ಕೆ ಬಂದೊದಗಿರುವ ಸ್ಥಿತಿಯನ್ನು ನೋಡಿ ಖಂಡಿತ ದುಃಖಪಡುತ್ತಿದ್ದರು ಎಂದು ವಿದ್ಯಾರ್ಥಿನಿ ಆಲ್ಮಾಸ್‌ ಹೇಳಿದರು.

ಧರ್ಮ ಮುಖ್ಯವೇ, ಶಿಕ್ಷಣ ಮುಖ್ಯವೇ ಎಂಬ ಅಸಂಬದ್ಧ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ನಮಗೆ ಧರ್ಮವೂ ಮುಖ್ಯ, ಶಿಕ್ಷಣವೂ ಮುಖ್ಯ. ನಮಗೂ ಎಲ್ಲರಂತೆ ತರಗತಿಗೆ ಹಾಜರಾಗಬೇಕು, ಪರೀಕ್ಷೆ ಬರೆಯಬೇಕು ಎಂಬ ಆಸೆ ಇದೆ. ಆದರೆ, ಹಿಜಾಬ್ ಧರಿಸಿ ಅವಕಾಶ ಕೊಡಬೇಕು ಎಂಬುದಷ್ಟೆ ನಮ್ಮ ಬೇಡಿಕೆ ಎಂದು ಆಲಿಯಾ ಅಸಾದಿ ಹೇಳಿದರು.

ಇವುಗಳನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT