ಕುಟುಂಬದ ಹಿರಿಯರಾದ ಟಿ. ನಾರಾಯಣ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ನೂರಾರು ಮಂದಿ ಕೃಷಿ ಕಾರ್ಮಿಕರು ವಾಡಿಕೆಯಂತೆ ಒಂದೇ ದಿನದಲ್ಲಿ ನಾಟಿ ಕಾರ್ಯ ಪೂರ್ಣಗೊಳಿಸಿದರು. ಮನೆಯ ಎದುರು ಇರುವ ಈ ಕಂಬಳ ಗದ್ದೆ 5.14 ಎಕರೆ ವಿಸ್ತಾರವಾಗಿದೆ. ಇದನ್ನು ‘ದೇವರಗದ್ದೆ’ ಎಂದು ಕುಟುಂಬದವರು, ಊರವರು ನಂಬುತ್ತಾರೆ. ಹೀಗಾಗಿ, ಇದರ ನಾಟಿ ಮತ್ತು ಕಟಾವು ಕಾರ್ಯಗಳು ಕೆಲವು ಕಟ್ಟಳೆಗೆ ಅನುಗುಣವಾಗಿ ನಡೆಯುತ್ತವೆ. ಇಡೀ ಗದ್ದೆಯ ನಾಟಿಯನ್ನು ಒಂದೇ ದಿನದಲ್ಲಿ ಮುಗಿಸಬೇಕು ಎಂಬ ಸಂಪ್ರದಾಯ ಅನುಸರಿಸುತ್ತಿದ್ದ ಕಾರಣ, ಹಿಂದೆ ಊರಿನ ಎಲ್ಲ ಉಳುಮೆ ಜಾನುವಾರು ಬಳಸಿ, ಉಳುಮೆ ಮಾಡಿ ನೂರಾರು ನಾಟಿಯಾಳುಗಳು ನೇಜಿ ನೆಡುತ್ತಿದ್ದರು. ಉಳುಮೆ ಜಾನುವಾರು ವಿರಳವಾದ ಕಾರಣ ಈಗ ಉಳುಮೆಗೆ ಟ್ರ್ಯಾಕ್ಟರ್ ಬಳಸಲಾಗುತ್ತಿದೆ. ನಾಟಿ ಮಾತ್ರ ಕಟ್ಟಳೆಯಂತೆ ನಡೆಯತ್ತಿದೆ. ಉಳುಮೆ ಮತ್ತು ನಾಟಿ ಪೂರ್ವದಲ್ಲಿ ಶುದ್ಧಾಚಾರ ಅನುಸರಿಸಿ ಗದ್ದೆಗೆ ಪೂಜೆ ಸಲ್ಲಿಸಲಾಗುತ್ತದೆ. ಗದ್ದೆಯ ಒಂದು ಮೂಲೆಯಲ್ಲಿರುವ ವೀರಗಲ್ಲು, ಈ ಗದ್ದೆ ಮತ್ತು ನಾಟಿ ಸಂಪ್ರದಾಯ ಪುರಾತನವಾದುದು ಎಂಬುದಕ್ಕೆ ಪುಷ್ಟಿ ನೀಡುತ್ತದೆ.