ಉಡುಪಿ: ಕೃಷ್ಣಮಠದಲ್ಲಿ ಆ.19ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಹಾಗೂ 20ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದ್ದು, ಪರ್ಯಾಯ ಕೃಷ್ಣಾಪುರ ಮಠದ ನೇತೃತ್ವದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.
ಭಕ್ತರಿಗೆ ಪ್ರಸಾದವಾಗಿ ಹಂಚಲು ಚಕ್ಕುಲಿ ಹಾಗೂ ಬಗೆಬಗೆಯ ಉಂಡೆಗಳ ತಯಾರಿ ಕಾರ್ಯಕ್ಕೆ ಗುರುವಾರ ಮಠದಲ್ಲಿ ಚಾಲನೆ ನೀಡಲಾಯಿತು. ವಿಟ್ಲಪಿಂಡಿಯ ದಿನ ಭಕ್ತರಿಗೆ ಪ್ರಸಾದವಾಗಿ ಚಕ್ಕುಲಿ ಹಾಗೂ ಉಂಡೆಗಳನ್ನು ವಿತರಿಸಲಾಗುತ್ತದೆ.
19ರಂದು ಮಧ್ಯರಾತ್ರಿ ಶುಭ ಮೂಹೂರ್ತದಲ್ಲಿ ಕೃಷ್ಣನಿಗೆ ಅರ್ಘ್ಯ ಪ್ರದಾನ ನಡೆಯಲಿದೆ. 20ರಂದು ಮಧ್ಯಾಹ್ನ ರಥಬೀದಿಯಲ್ಲಿ ವಿಟ್ಲಪಿಂಡಿ ಉತ್ಸವಕ್ಕೆ ಪರ್ಯಾಯ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.
ಅಂದು ಕೃಷ್ಣನ ಮೃಣ್ಮಯ (ಮಣ್ಣಿನ) ಮೂರ್ತಿಯನ್ನು ಚಿನ್ನದ ರಥದಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಗುತ್ತದೆ. ಸಾಂಪ್ರದಾಯಿಕ ಮೊಸರು ಕುಡಿಕೆ ಒಡೆಯುವ ದೃಶ್ಯ ನೋಡಲು ಸಾವಿರಾರು ಭಕ್ತರು ಆಗಮಿಸುತ್ತಾರೆ.