ಪಡುಬಿದ್ರಿ: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನ ಮಿಲಾದುನ್ನಬಿ ಆಚರಣೆಯು ಕಾಪು ತಾಲ್ಲೂಕಿನಾದ್ಯಂತ ಸಂಭ್ರಮ ಸಡಗರದಿಂದ ನಡೆಯಿತು.
ಕಾಪು, ಉಚ್ಚಿಲ, ಎರ್ಮಾಳ್, ಪಡುಬಿದ್ರಿ, ಸೇರಿದಂತೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ನಡೆದ ಮಿಲಾದ್ ರ್ಯಾಲಿಯಲ್ಲಿ ಮದ್ರಸಗಳ ವಿದ್ಯಾರ್ಥಿಗಳು, ದಫ್ ತಂಡಗಳು ಗಮನ ಸೆಳೆದವು.
ಮಸೀದಿಯಿಂದ ಹೊರಟ ಜಾಥಾವು ಆಯಾ ಮಸೀದಿ ವ್ಯಾಪ್ತಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ವಾಪಾಸ್ಸು ಮಸೀದಿಗೆ ಆಗಮಿಸಿ ಸಮಾಪನಗೊಂಡಿತು. ಬಳಿಕ ಮಸೀದಿಗಳಲ್ಲಿ ಅನ್ನದಾನವನ್ನು ಏರ್ಪಡಿಸಲಾಗಿತ್ತು.
ಕಾಪು, ಮಜೂರು, ಮಲ್ಲಾರು, ಚಂದ್ರನಗರ, ಪಕೀರ್ಣಕಟ್ಟೆ ಸಹಿತ ವಿವಿಧ ಮಸೀದಿಗಳಿಂದ ಹೊರಟ ಮಿಲಾದ್ ಜಾಥಾವು ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಸಾಗಿ ಕೊಪ್ಪಲಂಗಡಿ ಮಸೀದಿ ಸೇರಿತು. ಅಲ್ಲಿಂದ ಹೊರಟ ಜಾಥಾವು ಕಾಪು ಪೇಟೆ ಮೂಲಕ ಸಾಗಿ ಕಾಪು ಪೊಲಿಪು ಜುಮ್ಮಾ ಮಸೀದಿಯಲ್ಲಿ ಜಾಥ ಸಮಾಪನಗೊಂಡಿತು.
ವಿವಿಧ ದಫ್ ತಂಡಗಳು, ಮದ್ರಸ ವಿದ್ಯಾರ್ಥಿಗಳು, ನೂರಾರು ವಾಹನಗಳು ಜಾಥಾಕ್ಕೆ ಮೆರುಗು ನೀಡಿತು. ಈ ಸಂದರ್ಭದಲ್ಲಿ ಕಾಪು ಖಾಝಿ ಪಿ.ಬಿ.ಅಹಮ್ಮದ್ ಮುಸ್ಲಿಯಾರ್, ಪೊಲಿಪು ಮಸೀದಿ ಖತೀಬ್ ಇರ್ಷಾದ್ ಸಅದಿ ಹಾಜರಿದ್ದರು.
ಪಡುಬಿದ್ರಿಯ ಕಂಚಿನಡ್ಕ ಜುಮ್ಮಾ ಮಸೀದಿಯಿಂದ ಹೊರಟ ಮೀಲಾದ್ ಜಾಥಾವು ರಾಜ್ಯ ಹೆದ್ದಾರಿಯಾಗಿ ಪಡುಬಿದ್ರಿ ಪೇಟೆಯಾಗಿ ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಮಾರ್ಕೆಟ್ ರಸ್ತೆಯಾಗಿ ಪಡುಬಿದ್ರಿ ಜುಮಾ ಮಸೀದಿ ತಲುಪಿತು. ಜಾಥಾದಲ್ಲಿ ಸೌಟ್ ಮಕ್ಕಳ ಆಕರ್ಷಕ ಪಥ ಸಂಚಲನ, ಹೂಗುಚ್ಛ ಹಿಡಿದಿರುವ ಮದರಸ ಪುಟಾಣಿಗಳು ಗಮನ ಹೆಜ್ಜೆ ಇಟ್ಟಿರುವುದು ವಿಶೇಷ ಮೆರುಗು ನೀಡಿತು.
ಹೆಜಮಾಡಿ ಜುಮ್ಮಾ ಮಸೀದಿಯಿಂದ ಹೊರಟ ಜಾಥಾವು ಕೋಡಿ ರಸ್ತೆಯ ಮೂಲಕ ಹಾದು ಹೋಗಿ ಎನ್.ಎಸ್.ರಸ್ತೆಯಾಗಿ ರಾಷ್ಟ್ರೀಯ ಹೆದ್ದಾರಿ ಮೂಲಕ ಕನ್ನಂಗಾರ್ ಜುಮ್ಮಾ ಮಸೀದಿ ತಲುಪಿತು.
ಪಲಿಮಾರು ಜುಮ್ಮಾಮಸೀದಿ-ಫಲಿಮಾರು ಪೇಟೆಯಾಗಿ ಜುಮ್ಮಾಮಸೀದಿ ತಲುಪಿತು. ಎರ್ಮಾಳು, ಮೂಳೂರಿನಲ್ಲೂ ಸಂಭ್ರಮ ಸಡಗರದಿಂದ ಮೀಲಾದ್ ಜಾಥಾವು ನಡೆಯಿತು. ಮೀಲಾದ್ ಮುನ್ನಾ ಪ್ರವಾದಿ ಸಂದೇಶಗಳನ್ನು ಸಾರಲಾಯಿತು. ಮಕ್ಕಳ ಪ್ರತಿಭಾ ಸ್ಪರ್ಧೆ, ಸಾರ್ವಜನಿಕ ಅನ್ನದಾನವು ನಡೆಯಿತು.