ಉಡುಪಿ: ತಾಲ್ಲೂಕಿನ ನಿಟ್ಟೂರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮುರಳಿ ಕಡೇಕಾರ್ ಅವರು ನಿವೃತ್ತಿಯ ದಿನವೇ ಬಡ ವಿದ್ಯಾರ್ಥಿನಿಗೆ ಮನೆಯನ್ನು ಕಟ್ಟಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಶನಿವಾರ ತಾಲ್ಲೂಕಿನ ಕಕ್ಕುಂಜೆಯಲ್ಲಿ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳ ಸಮ್ಮುಖದಲ್ಲಿ ವಿದ್ಯಾರ್ಥಿನಿ ನಯನಾಗೆಮನೆ ಹಸ್ತಾಂತರಿಸಲಾಯಿತು. ಮುರಳಿ ಕಡೇಕಾರ್ 32 ವರ್ಷಗಳಿಂದ ನಿಟ್ಟೂರು ಶಾಲೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದು, 5 ವರ್ಷಗಳ ಹಿಂದೆ ಮುಖ್ಯೋಪಾಧ್ಯಾಯರಾಗಿ ಬಡ್ತಿ ಹೊಂದಿದ್ದರು.
ಅದೇ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಕೊರಗ ಸಮುದಾಯದ ನಯನಾ ಕುಟುಂಬ ತೀರಾ ಬಡತನದಲ್ಲಿರುವುದನ್ನು ಕಂಡು ಸ್ವಂತ ದುಡಿಮೆಯ ಹಣದಲ್ಲಿ ₹ 3.5 ಲಕ್ಷ ವ್ಯಯಿಸಿ ಚಿಕ್ಕದೊಂದು ಸೂರು ಕಟ್ಟಿಸಿಕೊಟ್ಟಿದ್ದಾರೆ.
‘ನಿವೃತ್ತಿಯ ದಿನ ವಿಶೇಷವಾಗಿರಬೇಕು ಎಂಬ ಉದ್ದೇಶದಿಂದ ಜೋಪಡಿಯಲ್ಲಿದ್ದ ನಯನಾಗೆ ಮನೆ ಕಟ್ಟಿಸಿಕೊಟ್ಟಿದ್ದೇನೆ. ಹಿಂದಿನಿಂದಲೂ ದುಡಿಮೆಯ ಒಂದು ಭಾಗವನ್ನು ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸುತ್ತಾ ಬಂದಿದ್ದೇನೆ. ಮುಂದೆಯೂ ಸಮಾಜಪರ ಕಾರ್ಯಗಳು ಮುಂದುವರಿಯಲಿವೆ’ ಎಂದು ಮುರಳಿ ಕಡೇಕಾರ್ ತಿಳಿಸಿದರು.