ಉಡುಪಿ: ಯತಿ ಶ್ರೇಷ್ಠರಾದ ವಿದ್ಯಾಮಾನ್ಯತೀರ್ಥ ಶ್ರೀಗಳ ಆರಾಧನೆ ಸಂದರ್ಭ ಬುಧವಾರ ಪಲಿಮಾರು ಮೂಲಮಠದಲ್ಲಿ ವಿದ್ಯಾಧೀಶ ತೀರ್ಥ ಸ್ವಾಮೀಜಿಗಳು ಕುರಿಯ ಗಣಪತಿ ಶಾಸ್ತ್ರಿಗಳಿಗೆ ಶ್ರೀ ವಿದ್ಯಾಮಾನ್ಯ ಯಕ್ಷಕಲಾ ಪ್ರಶಸ್ತಿ ನೀಡಿದರು.
ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಹಾಗೂ ಚಿತ್ರಾಪುರ ಮಠದ ವಿದ್ಯೇಂದ್ರತೀರ್ಥ ಸ್ವಾಮೀಜಿ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಯಕ್ಷಗಾನ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿರುವ ಕಟೀಲು ಮೇಳದಲ್ಲಿ 3 ದಶಕಗಳ ಕಾಲ ಭಾಗವತರಾಗಿ ಸೇವೆ ಸಲ್ಲಿಸಿರುವ ಕುರಿಯ ಗಣಪತಿ ಶಾಸ್ತ್ರಿಗಳಿಗೆ ಪ್ರಶಸ್ತಿ ಹಾಗೂ 50,000 ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಕುರಿಯ ಶಾಸ್ತ್ರಿಗಳು ತೆಂಕುತಿಟ್ಟು ಯಕ್ಷಗಾನ ಕ್ಷೇತ್ರಕ್ಕೆ ಭಾಗವತರಾಗಿ, ನಿರ್ದೇಶಕರಾಗಿ ನೀಡಿದ ವಿಶೇಷ ಕೊಡುಗೆಯನ್ನು ಪಲಿಮಾರು ವಿದ್ಯಾಧೀಶ ತೀರ್ಥ ಶ್ರೀಗಳು ಸ್ಮರಿಸಿದರು.
ಪ್ರಶಸ್ತಿ ಸ್ವೀಕರಿಸಿ ಕುರಿಯ ಗಣಪತಿ ಶಾಸ್ತ್ರೀಗಳು ಮಾತನಾಡಿ, ಕುರಿಯ ಮನೆತನಕ್ಕೆ ಹಾಗೂ ಕುರಿಯ ವಿಠಲ ಶಾಸ್ತ್ರಿಗಳಿಗೆ ಪ್ರಶಸ್ತಿಯ ಗೌರವ ಸಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮೈಸೂರಿನ ವಿದ್ವಾಂಸ ಡಾ.ಸಿ.ಎಚ್. ಶ್ರೀನಿವಾಸ ಮೂರ್ತಿ ಅವರಿಗೆ ₹ 1 ಲಕ್ಷ ನಗದು ಪುರಸ್ಕಾರ ಇರುವ ‘ಪರ ವಿದ್ಯಾಮಾನ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಅಭಿನಂದನಾ ಪತ್ರ ವಾಚಿಸಿದರು. ವಿದ್ವಾನ್ ಮೋಹನ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.