ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಅವರು ಬೆಂಬಲಿಗರೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು. ಮಾಜಿ ಸಚಿವರಾದ ಅವರ ತಾಯಿ ಮನೋರಮಾ ಮಧ್ವರಾಜ್ ಸಹ ಜೊತೆಗೆ ಇದ್ದಿದ್ದು ವಿಶೇಷವಾಗಿತ್ತು. ನಾಮಪತ್ರ ಸಲ್ಲಿಸಿ ಹೊರಗೆ ಬರುವಾಗ ಮಾಜಿ ಶಾಸಕ ರಘುಪತಿ ಭಟ್ ಅವರ ತಾಯಿ ಸರಸ್ವತಿ ಅವರನ್ನು ನೋಡಿದ ಅವರು ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಮಗನಿಗೆ ಆಶೀರ್ವಾದ ಮಾಡಲು ಅವರು ಮೊದಲೇ ಬಂದು ಕುಳಿತಿದ್ದರು. ‘ಇಂದು ಪುಷ್ಯ ನಕ್ಷತ್ರ. ನನ್ನ ತಾಯಿಯ ನಕ್ಷತ್ರ ಸಹ ಅದೇ ಆದ ಕಾರಣ ಅವರನ್ನು ಕರೆದುಕೊಂಡು ಬಂದೆ’ ಎಂದು ಪ್ರಮೋದ್ ಮಧ್ವರಾಜ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.