ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೀಸಲಾತಿ ತೆಗೆಯಿರಿ ಎಂದು ಹೇಳಿಲ್ಲ’

Last Updated 28 ನವೆಂಬರ್ 2017, 9:43 IST
ಅಕ್ಷರ ಗಾತ್ರ

ಉಡುಪಿ: ‘ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಿಗುತ್ತಿರುವ ಸೌಲಭ್ಯವನ್ನು ಬಹುಸಂಖ್ಯಾತರಿಗೂ ವಿಸ್ತರಿಸಬೇಕು ಎಂದು ಹೇಳಿದ್ದೇನೆಯೇ ಹೊರತು, ಸಂವಿಧಾನ ಬದಲಾಯಿಸಿ ಅಥವಾ ಮೀಸಲಾತಿ ನಿಲ್ಲಿಸಿ ಎಂದು ಹೇಳಿಲ್ಲ’ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸ್ಪಷ್ಟಪಡಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸವಲತ್ತನ್ನು ವಿಸ್ತರಣೆ ಮಾಡಿದರೆ ಬಹುಸಂಖ್ಯಾತ ರಾಗಿರುವ ದಲಿತರು ಹಾಗೂ ಹಿಂದುಳಿದ ವರ್ಗದವರು ನಡೆಸುವ ಶಿಕ್ಷಣ ಸಂಸ್ಥೆಗಳಿಗೂ ಹೆಚ್ಚಿನ ಸೌಲಭ್ಯ ಸಿಗಲಿದೆ. ಚರ್ಚ್‌ ಮತ್ತು ಮಸೀದಿಗೆ ಇರುವ ಸ್ವಾಯತ್ತತೆ ಮಂದಿರಗಳಿಗೂ ದೊರೆಯುತ್ತದೆ. ಧರ್ಮದ ಹೆಸರಿನಲ್ಲಿ ಸಮಾಜ ಒಡೆಯುವುದು ಬೇಡ, ಎಲ್ಲರನ್ನೂ ಸಮಾನವಾಗಿ ನೋಡಬೇಕು ಎಂಬುದಷ್ಟೇ ನನ್ನ ಆಶಯ. ಇದನ್ನು ಅರ್ಥ ಮಾಡಿಕೊಳ್ಳದೆ ಕೆಲವು ಸಾಹಿತಿಗಳು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದ್ದು ವಿಷಾದನೀಯ’ ಎಂದರು.

‘ಸಂವಿಧಾನ ತಿದ್ದುಪಡಿ ಮಾಡಿ ಎಂದ ತಕ್ಷಣ ಅದು ಸಂವಿಧಾನ ವಿರೋಧಿ ಹೇಳಿಕೆ ಆಗದು. ಈಗಾಗಲೇ ಹಲವು ಬಾರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಗಿದೆ. ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಅಂಬೇಡ್ಕರ್ ಕೆಲಸ ಮಾಡಿದರು. ಆದರೆ ಅವರೊಬ್ಬರೇ ಸಂವಿಧಾನವನ್ನು ಮಾಡಿದ್ದಲ್ಲ. ಸಮಿತಿಯಲ್ಲಿ ಅಲ್ಲಾಡಿ ರಾಮಸ್ವಾಮಿ, ಕೆ.ಎಂ. ಮುನ್ಶಿ ಮುಂತಾದವರು ಇದ್ದರು. 500ಕ್ಕಿಂತ ಅಧಿಕ ಸದಸ್ಯರಿದ್ದ ಸಂಘಟನಾ ಸಮಿತಿ ಸಂವಿಧಾನವನ್ನು ಅಂಗೀಕರಿಸಿದೆ. ಆದ್ದರಿಂದ ಸಂವಿಧಾನವನ್ನು ಅವಮಾನಿಸಿದರೆ ಅಂಬೇಡ್ಕರ್ ಮಾತ್ರವಲ್ಲ, ಇಡೀ ದೇಶವನ್ನೇ ಅವಮಾನಿಸಿದಂತೆ’ ಎಂದು ಹೇಳಿದರು.

ಸ್ವಾಮೀಜಿ ಅವರನ್ನು ರಿಪೇರಿ ಮಾಡಲು ಸಾಧ್ಯವಿಲ್ಲ ಎಂದು ಚಂಪಾ ಅವರು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ನನಗೂ ಅವರಿಗೂ ವೈಯಕ್ತಿಕ ವಿಶ್ವಾಸ ಇದೆ, ಆದರೆ ಅಭಿಪ್ರಾಯ ಭೇದ ಇದೆ. ಬಸವಣ್ಣನವರ ಅನುಯಾಯಿ ಎಂದು ಹೇಳುವ ಸಿದ್ದರಾಮಯ್ಯ ಅವರು ಗೋ ಹತ್ಯೆಯನ್ನು ನಿಷೇಧಿಸಲಿ’ ಎಂದರು.

ಅಷ್ಟ ಮಠದ ಎಲ್ಲ ಮಠಾಧೀಶರಿಗೆ ಧರ್ಮ ಸಂಸತ್‌ಗೆ ಆಹ್ವಾನ ನೀಡಲಾಗಿತ್ತು. ಆದರೆ ಕಾರಣಾಂತರಗಳಿಂದ ಕೆಲವರು ಬಂದಿಲ್ಲ. ಚುನಾವಣೆ ಬರುತ್ತಿರುವುದರಿಂದ ಕೇಂದ್ರ ಸರ್ಕಾರ ರಾಮ ಮಂದಿರ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸ ಇದೆ ಎಂದರು.

* * 

ಧರ್ಮದ ಹೆಸರಿನಲ್ಲಿ ಯಾವುದೇ ರೀತಿಯ ತಾರತಮ್ಯ ಇರಬಾರದು.
ವಿಶ್ವೇಶತೀರ್ಥ ಸ್ವಾಮೀಜಿ
ಪೇಜಾವರ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT