ಅಂಕೋಲಾ: ತಾಲ್ಲೂಕಿನ ನೆವಳಸೆಯಲ್ಲಿ ಈಚಿಗೆ ನಡೆದ ಅಡಿಕೆ ಕಳವು ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಅಂಕೋಲಾ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆರೋಪಿಗಳಿಂದ ಅಡಿಕೆ ಚೀಲಗಳು ಮತ್ತು ಕೃತ್ಯಕ್ಕೆ ಬಳಸಿದ ಕಾರು ವಶಕ್ಕೆ ಪಡೆಯಲಾಗಿದೆ.
ನೆವಳಸೆಯ ಆನಂದು ನಾಯ್ಕ ಮತ್ತು ಚಂದುಮಠದ ಮಾರುತಿ ಗೌಡ ಬಂಧಿತ ಆರೋಪಿಗಳು. ಆನಂದು, ಕಳವು ನಡೆದ ಮನೆಯ ಪಕ್ಕದ ನಿವಾಸಿ. ಇನ್ನೊಬ್ಬ ಆರೋಪಿ ಮಾರುತಿ, ಅಡಿಕೆ ಕಳವಾಗಿದ್ದ ಮಾಲೀಕನ ಹೊಸ ಮನೆಯ ನಿರ್ಮಾಣದಲ್ಲಿ ಕಾರ್ಮಿಕನಾಗಿ ಕಾರ್ಯ ನಿರ್ವಹಿಸಿದ್ದ. ಮನೆಯ ಮುಂಭಾಗದಲ್ಲಿ ಸಂಗ್ರಹಿಸಿಟ್ಟ 28 ಅಡಿಕೆ ಚೀಲಗಳಲ್ಲಿ 11 ಚೀಲ ಅಡಿಕೆಯನ್ನು ಇಬ್ಬರು ಗುರುವಾರ ತಡರಾತ್ರಿ ಕದ್ದೊಯ್ದಿದ್ದಾಗಿ ಆರೋಪಿಸಲಾಗಿದೆ. ಅವುಗಳನ್ನು ಎಂಟು ಚೀಲಗಳಲ್ಲಿ ತುಂಬಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಇಲ್ಲಿನ ನೆವಳಸೆಯ ಮಾದೇವ ಗೌಡ ಎನ್ನುವವರ ನಿರ್ಮಾಣ ಹಂತದಲ್ಲಿರುವ ಮನೆಯ ಮುಂಭಾಗದಲ್ಲಿದ್ದ ಅಡಿಕೆ ಚೀಲಗಳು ಕಳವಾದ ಕುರಿತು ಮಾಲೀಕರು ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಖಚಿತ ಸುಳಿವಿನ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿತರಿಂದ ಅಂದಾಜು ₹ 33,390 ಮೌಲ್ಯದ ಎಂಟು ಚೀಲಗಳಲ್ಲಿ ತುಂಬಿಡಲಾಗಿದ್ದ 1.38 ಕ್ಕಿಂಟಲ್ ತೂಕದ ಅಡಿಕೆ ಹಾಗೂ ಕಾರು ವಶಪಡಿಸಿಕೊಂಡಿದ್ದಾರೆ.
ಸಿ.ಪಿ.ಐ ಸಂತೋಷ ಶೆಟ್ಟಿ, ಪಿ.ಎಸ್.ಐ ಪ್ರವೀಣ ಕುಮಾರ, ಹವಾಲ್ದಾರ ಮೋಹನದಾಸ ಶೇಣ್ವಿ, ಸಿಬ್ಬಂದಿ ಮಂಜನಾಥ ಲಕ್ಮಾಪುರ, ಭಗವಾನ ಗಾಂವಕರ, ಶೇಖರ ಸಿದ್ದಿ, ಪರಮೇಶ, ಜಗದೀಶ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.