ಶಿರಸಿ: ‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ನಡೆಯಬಹುದು ಎಂಬುದು ಕಾಂಗ್ರೆಸ್ ಕಾಣುತ್ತಿರುವ ಹಗಲು ಕನಸು. ಅಂತಹ ಯಾವುದೇ ಬದಲಾವಣೆ ಈಗಿನ ಸರ್ಕಾರದಲ್ಲಿ ನಡೆಯುವುದಿಲ್ಲ’ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ತಾಲ್ಲೂಕಿನ ಗುಡ್ನಾಪುರದ ಕೆರೆಗೆ ಬುಧವಾರ ಬಾಗಿನ ಅರ್ಪಿಸಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಅವರು, ‘ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಕಳೆದ ಒಂದು ವರ್ಷದಿಂದ ಉತ್ತಮವಾಗಿ ಕಾರ್ಯ ನಿಭಾಯಿಸುತ್ತಿದ್ದಾರೆ. ಅವರ ನೇತೃತ್ವದಲ್ಲೇ ಮುಂದಿನ ಚುನಾವಣೆಯನ್ನೂ ಎದುರಿಸಲಿದ್ದೇವೆ. ಈ ಕುರಿತು ರಾಜ್ಯದ ಜನರಿಗೆ ಸಂದೇಹ ಬೇಡ’ ಎಂದರು.
‘ಅತಿವೃಷ್ಟಿಯಿಂದ ಉಂಟಾದ ಹಾನಿಯ ಕುರಿತು ಸಮೀಕ್ಷೆ ನಡೆಯುತ್ತಿದ್ದು ವರದಿ ಬಂದ ಬಳಿಕ ಸರ್ಕಾರ ಸೂಕ್ತ ಪರಿಹಾರ ನೀಡಲಿದೆ. ಜಿಲ್ಲೆಯಲ್ಲಿ ರೈತರಿಗೆ ಮಧ್ಯವರ್ತಿ ಬ್ಯಾಂಕ್ ಮುಖಾಂತರ ₹ 900 ಕೋಟಿಗೂ ಹೆಚ್ಚು ಮೊತ್ತದ ಕೃಷಿ ಸಾಲ, ₹ 500 ಕೋಟಿಗೂ ಹೆಚ್ಚು ಮಾಧ್ಯಮಿಕ ಸಾಲ ನೀಡಲಾಗಿದೆ. ರೈತರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮವಹಿಸಲಾಗುವುದು’ ಎಂದರು.
ಬಳಿಕ ಬನವಾಸಿಯ ಪ್ರವಾಸಿ ಮಂದಿರದಲ್ಲಿ ಸಚಿವರ ಸಮ್ಮುಖದಲ್ಲಿ ವದ್ದಲ ಭಾಗದ 50ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು.