ಕಾರವಾರ ನಗರದಲ್ಲಿ ಸದ್ಯ ಇರುವ ವಾಹನಗಳ ಸಂಖ್ಯೆಗೆ ಅನುಗುಣವಾಗಿ ಪ್ರಮುಖ ರಸ್ತೆಗಳಲ್ಲಿ ನಿಲುಗಡೆಗೆ ಸ್ಥಳಾವಕಾಶವಿದೆ. ಆದರೆ, ಬಹುತೇಕ ಕಡೆಗಳಲ್ಲಿ ಕೆಲವರಿಂದ ಕೃತಕವಾಗಿ ಸಮಸ್ಯೆ ಉಂಟಾಗುತ್ತಿದೆ.
ನಗರಸಭೆ, ಪೊಲೀಸ್ ಇಲಾಖೆಯವರು ಕೆಲವೆಡೆ ಅಂಗಡಿಗಳು, ಮಳಿಗೆಗಳ ಮುಂದೆ ರಸ್ತೆಗೆ ಬಿಳಿಯ ಬಣ್ಣ ಬಳಿದು ವಾಹನಗಳ ನಿಲುಗಡೆಗೆ ಸ್ಥಳ ಗುರುತಿಸಿದ್ದಾರೆ. ಉಳಿದೆಡೆ ಹಾಗೇ ನಿಲ್ಲಿಸಲು ಅವಕಾಶ ನೀಡಲಾಗಿದೆ. ಆ ಚೌಕಟ್ಟಿನಲ್ಲೇ ವಾಹನಗಳನ್ನು ನಿಲ್ಲಿಸಿದರೆ ಹಲವು ವಾಹನಗಳನ್ನು ನಿಲ್ಲಿಸಬಹುದು.
ಆದರೆ, ಕೆಲವರು ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಾರೆ. ಬಿಳಿಯ ಚೌಕಟ್ಟಿನಲ್ಲಿ ನಿಲ್ಲಿಸಲೂ ಉದಾಸೀನ ತೋರುತ್ತಾರೆ. ಇದರಿಂದ ಮೂರು ದ್ವಿಚಕ್ರ ವಾಹನಗಳನ್ನು ನಿಲ್ಲಿಸುವ ಜಾಗವನ್ನು ಒಂದೇ ವಾಹನ ಆಕ್ರಮಿಸಿಕೊಳ್ಳುತ್ತದೆ. ಇದರಿಂದ ಇತರರಿಗೆ ಜಾಗದ ಕೊರತೆಯಾಗುತ್ತಿದೆ.
‘ವಾಹನಗಳನ್ನು ಸರಿಯಾಗಿ ನಿಲ್ಲಿಸಿ’ ಎಂದು ಮನವಿ ಮಾಡಿಕೊಂಡಾಗ, ‘ಈಗ ತೆಗೀತೇವೆ, ತೊಂದರೆಯಿಲ್ಲ’ ಎಂಬ ಅಸಡ್ಡೆಯ ಉತ್ತರ ಕೊಡುತ್ತಾರೆ. ಕೆಲವರು ವಾಗ್ವಾದಕ್ಕೂ ಇಳಿಯುತ್ತಾರೆ.
ಸುಗಮ ಸಂಚಾರಕ್ಕಾಗಿ, ನಿಯಮ ಪಾಲನೆಗಾಗಿ ನಗರದ ಕೆಲವೆಡೆ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸಂಚಾರ, ನಗರ ಪೊಲೀಸ್ ಠಾಣೆಯ ಸುತ್ತಮುತ್ತ ಪೊಲೀಸರ ಸಂಚಾರ ಸದಾ ಇರುತ್ತದೆ. ಆ ಪರಿಸರದಲ್ಲೂ ಇದೇ ಪರಿಸ್ಥಿತಿಯಿದೆ.
ಕೃತಕವಾಗಿ ಟ್ರಾಫಿಕ್ ಜಾಮ್ ಉಂಟು ಮಾಡುವುದು, ಸಾರ್ವಜನಿಕರೆಲ್ಲರಿಗೂ ಇರುವ ಜಾಗವನ್ನು ಕೆಲವರೇ ಅತಿಕ್ರಮಿಸಿಕೊಳ್ಳುವುದು ತಪ್ಪಲ್ಲವೇ? ಅವುಗಳ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ, ನಾಗರಿಕ ಪ್ರಜ್ಞೆಯನ್ನು ಬೆಳೆಸಲು ಯಾಕೆ ಮುಂದಾಗುತ್ತಿಲ್ಲ ಎಂಬುದು ಅನುಮಾನ ಮೂಡಿಸುತ್ತದೆ.