ಕಾರವಾರ: ‘ಇನ್ನುಮುಂದೆ ತುರ್ತು ಕೆಲಸಗಳಿಗೂ ಸಂಬಂಧಿಸಿದ ಇಲಾಖೆಯವರು ಲಿಖಿತ ಆದೇಶ ನೀಡುವವರೆಗೆ ಕೆಲಸಗಳನ್ನು ಮಾಡುವುದಿಲ್ಲ’ ಎಂದು ಕಾರವಾರ ತಾಲ್ಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾಧವ ನಾಯಕ ಹೇಳಿದರು.
ಇತ್ತೀಚಿಗೆ ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ ಅವರಿಗೆ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಸಂತೋಷ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
‘ಮೌಖಿಕವಾಗಿ ಹೇಳಿದ್ದಕ್ಕೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಕೆಲಸ ಮಾಡಿದ್ದರು. ಆದರೆ, ಅವರಿಗೆ ಬಿಲ್ ಪಾವತಿಸಲಿಲ್ಲ. ಎಷ್ಟೋ ತುರ್ತು ಕಾಮಗಾರಿಗಳನ್ನು ನಾವು ಕೂಡ ಮೌಖಿಕವಾಗಿ ಹೇಳಿದ್ದಕ್ಕೆ ಮಾಡಿದ್ದೇವೆ, ಈಗಲೂ ಮಾಡುತ್ತಿದ್ದೇವೆ. ವಿಶ್ವಾಸದ ಮೇಲೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತೇವೆ. ಆದರೆ, ಇನ್ನುಮುಂದೆ ತುರ್ತು ಕೆಲಸಗಳಿಗೂ ಲಿಖಿತ ಆದೇಶ ನೀಡಬೇಕು’ ಎಂದು ಹೇಳಿದರು.
ಸಂದೇಶ್ ನಾಯ್ಕ ಅಂಕೋಲಾ, ಛತ್ರಪತಿ ಮಾಳ್ಸೇಕರ್, ಡಿ.ಕೆ.ನಾಯ್ಕ, ರಾಜೇಶ್ ಶೇಟ್, ರಾಮನಾಥ ನಾಯ್ಕ, ರಾಮ ಜೋಶಿ, ರಾಜೇಂದ್ರ ಅಂಚೇಕರ್, ಮನೋಜಕುಮಾರ್, ಪರಮಾನಂದ ನಾಯ್ಕ, ಚಂದನ್ ಮಾಳ್ಸೇಕರ್, ಬಿ.ಡಿ.ಸ್ವಾಮಿ, ಪ್ರಸಾದ ಕಾಣೇಕರ್, ರಾಜ್ ಸಾಗೇಕರ್, ರೂಪೇಶ್ ನಾಯ್ಕ ಇದ್ದರು.