ಶಿರಸಿ: ಉತ್ತರ ಪ್ರದೇಶದಲ್ಲಿ ವಾಹನ ಹಾಯ್ದು ಸಾವಿಗೀಡಾದ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಲು ಹೊರಟಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸುವ ಮೂಲಕ ಬಿಜೆಪಿ ಸರ್ಕಾರ ತನ್ನ ಸರ್ವಾಧಿಕಾರಿ ಧೋರಣೆ ಬಿಂಬಿಸಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಭಾಗವತ ಆರೋಪಿಸಿದರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದುರ್ಘಟನೆಗೆ ಕಾರಣರಾದವರನ್ನು ಬಂಧಿಸುವುದನ್ನು ಬಿಟ್ಟು ಸಾಂತ್ವನ ಹೇಳಲು ಮುಂದಾದ ವಿರೋಧ ಪಕ್ಷದ ನಾಯಕರನ್ನು ತಡೆಯಲಾಗಿದೆ. ಬಿಜೆಪಿ ಪ್ರತಿಭಟಿಸುವ ಹಕ್ಕು, ಸಾಂತ್ವನ ಹೇಳುವ ಹಕ್ಕು ಕಸಿಯಲು ಹೊರಟಿದೆ’ ಎಂದರು.
‘ಪ್ರಿಯಾಂಕಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಬಂಧಿಸಿವ್ಯಕ್ತಿಗತ ಸ್ವಾತಂತ್ರ್ಯಕ್ಕೆ ಧಕ್ಕೆ ತಂದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು. ಬಿಜೆಪಿ ಸರ್ಕಾರ ತನ್ನ ದಮನಕಾರಿ ನೀತಿ ಕೈಬಿಡಲಿ’ ಎಂದು ಒತ್ತಾಯಿಸಿದರು.
ಕಿಸಾನ್ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ, ‘ದೇಶದಾದ್ಯಂತ ಬಿಜೆಪಿ ಸರ್ಕಾರ ಭಯದ ವಾತಾವರಣ ಉಂಟುಮಾಡುತ್ತಿದೆ. ರೈತಪರ ಚಳುವಳಿ ಹತ್ತಿಕ್ಕುವ ಕೆಲಸವಾಗುತ್ತಿದೆ’ ಎಂದು ಆರೋಪಿಸಿದರು.
ದೀಪಕ ದೊಡ್ಡೂರು, ಶಿವಾನಂದ ಹೆಗಡೆ ಕಡತೋಕಾ, ಶ್ರೀನಿವಾಸ ನಾಯ್ಕ, ಜಗದೀಶ ಗೌಡ, ಶ್ರೀಲತಾ ಕಾಳೇರಮನೆ, ಬಸವರಾಜ ದೊಡ್ಮನಿ, ಡಿ.ಎನ್.ಗಾಂವ್ಕರ್, ಕೃಷ್ಣ ಹಿರೇಹಳ್ಳಿ ಇದ್ದರು.