ಕಾರವಾರ: ಅಖಿಲ ಭಾರತಬಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುವುದಾಗಿ ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಪಾಂಡುರಂಗ ಪಮ್ಮಾರ ಹೇಳಿದರು.
ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದ ವಿವಿಧ ರಾಜ್ಯಗಳಲ್ಲಿ ಬಂಜಾರ ಸಮುದಾಯಕ್ಕೆ ಸೇರಿದ 14 ಕೋಟಿಗೂ ಹೆಚ್ಚು ಜನರಿದ್ದಾರೆ. ಆದರೆ ಸಮುದಾಯವನ್ನು ಬೇರೆ ಬೇರೆ ರಾಜ್ಯದಲ್ಲಿ ಪ್ರತ್ಯೇಕ ಜಾತಿ ಮೀಸಲಾತಿ ಪಟ್ಟಿಗೆ ಸೇರಿಸಲಾಗಿದೆ. ಕರ್ನಾಟಕದಲ್ಲಿ ಬಂಜಾರ ಜನಾಂಗ ಪರಿಶಿಷ್ಟ ಜಾತಿಗೆ ಸೇರಿದ್ದರೆ, ಆಂಧ್ರದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದೆ. ಮಹಾರಾಷ್ಟ್ರದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿದೆ’ ಎಂದರು.
‘ದೇಶದ ಎಲ್ಲ ರಾಜ್ಯಗಳಲ್ಲಿ ಲಂಬಾಣಿಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು. ಬಂಜಾರ ಅಥವಾ ಲಂಬಾಣಿ ಭಾಷೆಯನ್ನು ಭಾರತ ಸರ್ಕಾರ 8ನೇ ಷೆಡ್ಯೂಲ್ನಲ್ಲಿ ಸೇರಿಸಿ ಮಾನ್ಯತೆ ನೀಡಬೇಕು. ಈ ಭಾಷೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಕೇಂದ್ರ ತೆರೆಯಬೇಕು’ ಎಂದು ಒತ್ತಾಯಿಸಿದರು.
‘ರಾಜ್ಯದಲ್ಲಿರುವ ಎಲ್ಲ 5,788 ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಬೇಕು. ನಿಗಮ ಮಂಡಳಿಯಲ್ಲಿ ಬಂಜಾರ ಸಮುದಾಯದವರಿಗೆ ಆದ್ಯತೆ ನೀಡಬೇಕು’ ಎಂದರು.
ಸಮುದಾಯದ ಪ್ರಮುಖರಾದ ಭೀಮಣ್ಣ ರಜಪೂತ, ಬಾಬು ಪವಾರ, ಸುರೇಶ ನಾಯಕ, ದುಂಡಪ್ಪ ಜಾಧವ, ಉಮೇಶ ದೊಡ್ಮನಿ, ಉಮೇಶ ಲಮಾಣಿ, ಅನಿಲ ಪವಾರ ಇದ್ದರು.