ಕಾರವಾರ: ನಗರದ ‘ಪಹರೆ ವೇದಿಕೆ’ಯು ತನ್ನ ಆರನೇ ವರ್ಷಾಚರಣೆಯ ಅಂಗವಾಗಿ ಈಚೆಗೆ ಆಯೋಜಿಸಿದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ, ದಿಶಾ ಟಿ.ಹರಿಕಂತ್ರ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಅವರು ಸದಾಶಿವಗಡ ಬಿ.ಜಿ.ವಿ.ಎಸ್ ಪದವಿ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿ. ಪಹರೆ ವೇದಿಕೆಯು ‘ಸ್ವಚ್ಚತೆ ಮತ್ತು ಸಮೃದ್ಧತೆ’ ವಿಷಯದಲ್ಲಿ ರಾಜ್ಯಮಟ್ಟದ ಪ್ರಬಂಧ ಸ್ಫರ್ಧೆ ಏರ್ಪಡಿಸಿತ್ತು. ನಗರದ ಮಯೂರವರ್ಮ ವೇದಿಕೆಯ ಹಿಂಭಾಗ ಜ.23ರಂದು ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಯಿತು.
ಶಾಸಕಿ ರೂಪಾಲಿ ಎಸ್.ನಾಯ್ಕ, ಕೃಷಿ ಸಾಧಕಿ ಕವಿತಾ ಮಿಶ್ರಾ, ನಟ ಅರುಣ್ ಸಾಗರ, ನಗರಸಭೆ ಅಧ್ಯಕ್ಷ ಡಾ.ನಿತಿನ್ ಪಿಕಳೆ, ಪಹರೆ ವೇದಿಕೆ ಗೌರವಾಧ್ಯಕ್ಷ ಸದಾನಂದ ಮಾಂಜ್ರೇಕರ್ ವೇದಿಕೆಯಲ್ಲಿದ್ದರು.
ಪ್ರಬಂಧ ಸ್ಪರ್ಧೆಯಲ್ಲಿ ಚಿನ್ಮಯಿ ಬಿ.ನಾಯಕ ದ್ವಿತೀಯ, ನಿಖಿತಾ ಮಾಂಜ್ರೇಕರ್ ಹಾಗೂ ಕೀರ್ತಿ ಡಿ.ನಾಯ್ಕ ತೃತೀಯ ಸ್ಥಾನ ಗೆದ್ದುಕೊಂಡರು. ವಿಜೇತರಿಗೆ ಪ್ರಥಮ ಬಹುಮಾನ ₹ 10 ಸಾವಿರ, ದ್ವಿತೀಯ ಬಹುಮಾನ ₹ 5 ಸಾವಿರ ಹಾಗೂ ತೃತೀಯ ಬಹುಮಾನ ₹ 3 ಸಾವಿರ ಮತ್ತು ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು.
ವೇದಿಕೆಯು ಹಮ್ಮಿಕೊಂಡ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಮಂಜಿಷ್ಟಾ ಎಸ್. ಖಾಲ್ವಾಡೇಕರ ಪ್ರಥಮ ಬಹುಮಾನ ಪಡೆದರು. ಚಿತ್ರಕಲಾ ಸ್ಪರ್ಧೆಯಲ್ಲಿ ಧನ್ಯಾ ಪ್ರವೀಣ ರೇವಣಕರ ದ್ವಿತೀಯ ಹಾಗೂ ಕೆ.ಜಾನಬೆಲ್ ತೃತೀಯ ಬಹುಮಾನ ಜಯಿಸಿದರು.