ಶಿರಸಿ: ವಿದ್ಯಾರ್ಥಿಗಳಿಗೆ ಗುಣಾತ್ಮಕ, ಸ್ಪರ್ಧಾತ್ಮಕ ಶಿಕ್ಷಣ ನೀಡುವ ಆಶಯದೊಂದಿಗೆ ಜೀವನ ಶಿಕ್ಷಣದ ಪಾಠ ಮಾಡುತ್ತಿರುವ ಇಲ್ಲಿನ ಲಯನ್ಸ್ ಶಿಕ್ಷಣ ಸಂಸ್ಥೆಯು ಶಾಲೆಯ ಸೌಲಭ್ಯ ಹೆಚ್ಚಿಸುವ ಭಾಗವಾಗಿ, ಹಣಕಾಸು ಕ್ರೋಡೀಕರಿಸಲು ಜ.6ರಂದು ‘ಲಯನ್ಸ್ ಸಂಗೀತ ಸೌರಭ’ ಆಯೋಜಿಸಿದೆ.
ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರತಿಭಾ ಹೆಗಡೆ, ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಎಂ.ಭಟ್ಟ ಅವರು, ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದರು. ಪಂಡಿತ್ ವೆಂಕಟೇಶಕುಮಾರ್ ಶಾಸ್ತ್ರೀಯ ಗಾಯನ, ಅಂಕುಶ ನಾಯಕ ಸಿತಾರ್ ವಾದನ, ನರೇಂದ್ರ ನಾಯಕ ಹಾರ್ಮೋನಿಯಂ, ಕೇಶವ ಜೋಷಿ ತಬಲಾ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದೆ. ಅಂದು ಸಂಜೆ 6 ಗಂಟೆಯಿಂದ ಶಾಲೆಯ ಆವರಣದಲ್ಲಿ ನಡೆಯುವ ಕಾರ್ಯಕ್ರಮದಿಂದ ಸಂಗ್ರಹವಾಗುವ ಹಣದಿಂದ ಶಾಲೆಯ ವಿವಿಧ ಭಾಗಗಳ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ ಎಂದರು.
ಪ್ರಸ್ತುತ ಶಾಲೆಯಲ್ಲಿ 25 ತರಗತಿಗಳು ನಡೆಯುತ್ತಿವೆ. 1124 ವಿದ್ಯಾರ್ಥಿಗಳಿದ್ದು, 38 ಶಿಕ್ಷಕರಿದ್ದಾರೆ. ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ, ಗಣಿತ ಪ್ರಯೋಗಾಲಯ, ಬಯಲು ರಂಗ ಮಂದಿರ, ಆಧುನಿಕ ಶೌಚಗೃಹ, ಐದು ತರಗತಿ ಕೊಠಡಿ ನಿರ್ಮಾಣಕ್ಕೆ ರೂಪಿಸಿರುವ ಯೋಜನೆಗೆ ₹ 1.30 ಕೋಟಿ ನೆರವು ಅಗತ್ಯವಿದೆ. ಕಾಯಂ ಅನುದಾನರಹಿತ ಶಾಲೆಯಾಗಿರುವ ಇದಕ್ಕೆ, ಸರ್ಕಾರಗಳಿಂದಲೂ ನೆರವು ದೊರೆತರೆ ಇನ್ನಷ್ಟು ಅಭಿವೃದ್ಧಿ ಸಾಧ್ಯವಾಗುತ್ತದೆ. ಅಂಕ ಗಳಿಕೆಯೊಂದೇ ಗುರಿಯಾಗಿರದೇ, ವ್ಯಕ್ತಿತ್ವ ರೂಪಿಸುವ ಶಿಕ್ಷಣ ನೀಡಲಾಗುತ್ತಿದೆ ಎಂದು ಎಂ.ಎಂ.ಭಟ್ಟ ಹೇಳಿದರು.
ರಾಜ್ಯ ಪಠ್ಯಕ್ರಮ ಮತ್ತು ಕೇಂದ್ರೀಯ ಪಠ್ಯಕ್ರಮದ ಪಠ್ಯಪುಸ್ತಕಗಳು ಬಹುತೇಕ ಒಂದೇ ಆಗಿರುವುದರಿಂದ ಸದ್ಯ ಕೇಂದ್ರೀಯ ಪಠ್ಯಕ್ರಮದ ಶಾಲೆ ಮಾಡುವ ಯೋಜನೆಯಿಲ್ಲ. ಗುಣಮಟ್ಟದ ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಮುಖರಾದ ಅಂಜನಾ ಭಟ್ಟ, ಪ್ರಭಾಕರ ಹೆಗಡೆ, ಶ್ರೀಕಾಂತ ಹೆಗಡೆ, ರಮಾ ಪಟವರ್ಧನ, ಎನ್.ವಿ.ಜಿ.ಭಟ್ಟ, ಮುಖ್ಯ ಶಿಕ್ಷಕರಾದ ಮೋಹನ ಹೆಗಡೆ, ಗಣಪತಿ ಗೌಡ ಇದ್ದರು.
ಫೌಂಡೇಷನ್ ಕೋರ್ಸ್ ಯೋಜನೆ
ಲಯನ್ಸ್ ವ್ಯಕ್ತಿ ಕೇಂದ್ರಿತ ಸಂಸ್ಥೆಯಲ್ಲ, ಬದಲಾಗಿ ವ್ಯವಸ್ಥೆ ಕೇಂದ್ರೀತ ಸಂಸ್ಥೆಯಾಗಿದೆ. ಮಕ್ಕಳಿಗೆ ಕೌಶಲಾಭಿವೃದ್ಧಿ ಕಲಿಸುವ ಜತೆಗೆ, ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಕನಸಿನೊಂದಿಗೆ ಐಐಟಿ, ನೀಟ್, ಎನ್ಟಿಎಸ್ಸಿ, ಒಲಂಪಿಯಾಡ್ ಪರೀಕ್ಷೆಗಳು, ಸ್ಫರ್ಧಾತ್ಮಕ ಪರೀಕ್ಷೆಗಳು, ಸ್ಪೆಲ್ಲಿಂಗ್ ಬಿ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆಗಳಿಗೆ ತಳಪಾಯವಾದ ಫೌಂಡೇಷನ್ ಕೋರ್ಸ್ ಪ್ರಾರಂಭಿಸಲು ಯೋಚಿಸಲಾಗಿದೆ ಎಂದು ಶಿಕ್ಷಣ ಸಂಸ್ಥೆ ಅಧ್ಯಕ್ಷ ತ್ರಿವಿಕ್ರಮ ಪಟವರ್ಧನ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.