ಕಾರವಾರ: ನಗರದ ಕೆ.ಎಚ್.ಬಿ ಹೊಸ ಬಡಾವಣೆಯ ಸಣ್ಣ ಉದ್ಯಾನಕ್ಕೆ ಸ್ಥಳೀಯರು ‘ಮುನ್ಸಿಪಾಲಿಟಿ ಮಾಸ್ಕಿಟೊ ಗಾರ್ಡನ್’ (ನಗರಸಭೆಯ ಸೊಳ್ಳೆ ಉದ್ಯಾನ) ಎಂದು ನಾಮಕರಣ ಮಾಡಿದ್ದಾರೆ!
ಈಉದ್ಯಾನದಲ್ಲಿ ನೀರು ನಿಂತು, ಗಿಡಗಂಟಿಗಳು ಬೆಳೆದಿವೆ. ಇದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಿದ್ದು, ಸುತ್ತಮುತ್ತಲಿನ ಮನೆಯವರ ನೆಮ್ಮದಿ ಕಸಿದುಕೊಂಡಿದೆ. ಹೀಗಾಗಿ ಪ್ರತಿಭಟನಾ ಸೂಚಕವಾಗಿ ಸ್ಥಳೀಯರೇ ಬಿಳಿಯ ಹಾಳೆಯಲ್ಲಿ ‘ಸೊಳ್ಳೆ ಉದ್ಯಾನ’ ಎಂದು ಬರೆದು ಬೇಲಿಗೆ ನೇತು ಹಾಕಿದ್ದಾರೆ.
ಇಲ್ಲಿ ಈ ಮೊದಲು ತೆರೆದ ಜಾಗವಿತ್ತು. ಕೆಲವು ತಿಂಗಳ ಹಿಂದೆ ನಗರಸಭೆಯಿಂದ ಒಂದು ಅಡಿ ಎತ್ತರದ ಕಟ್ಟೆ ಕಟ್ಟಿ, ತಂತಿ ಬೇಲಿ ಅಳವಡಿಸಿ ಒತ್ತುವರಿ ಮಾಡಿಕೊಳ್ಳದಂತೆಮುನ್ನೆಚ್ಚರಿಕೆ ವಹಿಸಲಾಗಿತ್ತು. ಆದರೆ, ಇದರಿಂದ ಮಳೆ ನೀರು ಸರಾಗವಾಗಿ ಹರಿದುಹೋಗದೇ ಸಮಸ್ಯೆ ಹೆಚ್ಚಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ನಗರಸಭೆ ಸ್ವಚ್ಛತಾ ಪರಿವೀಕ್ಷಕ ಯಾಕೂಬ್ ಶೇಖ್, ಈ ಬಗ್ಗೆಪರಿಶೀಲಿಸುವುದಾಗಿ ತಿಳಿಸಿದ್ದಾರೆ.