ಸಾಗರ: ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಹಲವು ರೀತಿಯ ಸೌಲಭ್ಯಗಳು ಲಭ್ಯವಿದ್ದು, ಅದನ್ನು ಪಡೆಯಬೇಕಾದರೆ ಕಾರ್ಮಿಕ ಇಲಾಖೆಯಿಂದ ನೀಡಲಾಗುವ ಕಾರ್ಡ್ ಅನ್ನು ಹೊಂದಿರಬೇಕು ಎಂದು ಸ್ವರಾಜ್ ಅಭಿಯಾನದ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಕುಗ್ವೆ ಹೇಳಿದರು.ಸ್ವರಾಜ್ ಸೇವಾ ಕೇಂದ್ರ ಹಾಗೂ ಕರ್ನಾಟಕ ಶ್ರಮಿಕ ಕಾರ್ಮಿಕರ ಒಕ್ಕೂಟ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರಿಗೆ ಇರುವ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ಕಾರ್ಯಕ್ರಮಕ್ಕೆ ಮಾಹಿತಿ ಪತ್ರ ವಿತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಹಲವು ರೀತಿಯ ಸೌಲಭ್ಯಗಳನ್ನು ನೀಡುತ್ತಿದ್ದರೂ ಬಹುತೇಕ ಕಟ್ಟಡ ಕಾರ್ಮಿಕರಿಗೆ ಈ ಬಗ್ಗೆ ಸೂಕ್ತ ಮಾಹಿತಿ ಇಲ್ಲದೇ ಇರುವುದರಿಂದ ಅವರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇದನ್ನು ತಪ್ಪಿಸುವ ಸಲುವಾಗಿ ಸಂಸ್ಥೆಯು ಕಟ್ಟಡ ಕಾರ್ಮಿಕರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ನಡೆಸುತ್ತಿದೆ ಎಂದರು.ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರು ಕಾರ್ಡ್ ಪಡೆದರೆ ಮನೆ ಖರೀದಿಗೆ ಸಾಲ ಸೌಲಭ್ಯ, ಕಟ್ಟಡ ಕಾಮಗಾರಿ ಸಂದರ್ಭದಲ್ಲಿ ಗಾಯಗೊಂಡರೆ ಅಪಘಾತ ಪರಿಹಾರ ನಿಧಿ, ಪಿಂಚಣಿ ಸೌಲಭ್ಯ, ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಸೇರಿದಂತೆ ಹತ್ತು ಹಲವು ಸೌಲಭ್ಯಗಳು ಲಭ್ಯವಿದೆ ಎಂದು ಅವರು ತಿಳಿಸಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು, ತಾಲ್ಲೂಕು ಸಂಚಾಲಕ ನಾಗರಾಜ್, ಮಂಜಪ್ಪ ಸಿ. ಭಾಗ್ಯ ಬಿ.ಗೌಡ, ಶ್ವೇತಾ, ವೈ.ಎನ್.ಹುಬ್ಬಳ್ಳಿ, ವಸಂತ ಕುಗ್ವೆ ಹಾಜರಿದ್ದರು.