ಶಿರಸಿ: ಸ್ಥಳೀಯ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ಬೆಳೆಸುವ ನಿಟ್ಟಿನಲ್ಲಿ ಜಿಲ್ಲೆಯ ದೈಹಿಕ ಶಿಕ್ಷಣ ಶಿಕ್ಷಕರು, ಪಾಲಕರಿಗೆ ಒಂದು ದಿನದ ಕಾರ್ಯಾಗಾರವನ್ನು ನ.25 ರಂದು ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದೆ ಎಂದು ಅಂತರಾಷ್ಟ್ರೀಯಮಟ್ಟದ ಕ್ರೀಡಾ ತರಬೇತುದಾರ ಕಾಶಿನಾಥ ನಾಯ್ಕ ಹೇಳಿದರು.
ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಡಿದ ಅವರು, ‘ಜಾವೆಲಿನ್ ಎಸೆತ ಹಾಗೂ ಅಥ್ಲೆಟಿಕ್ಸ್ ಕುರಿತು ಆಸಕ್ತರಿಗೆ ತರಬೇತಿ ನೀಡಲಾಗುವದು. ಕ್ರೀಡಾಪಟುಗಳು ಮಾಡಬೇಕಾದ ವ್ಯಾಯಾಮ, ಗಾಯಗೊಂಡ ವೇಳೆ ಉಪಚರಿಸುವ ಬಗೆ, ಆಟದ ರೀತಿಗಳ ಬಗ್ಗೆ ವಿವರಿಸಲಾಗುವದು’ ಎಂದರು.
‘ಜಾವೆಲಿನ್ ಎಸೆತ ಸೇರಿದಂತೆ ಅಥ್ಲೆಟಿಕ್ಸ್ ಪಟುಗಳಿಗೆ ಕಳೆದ 22 ವರ್ಷಗಳಿಂದ ತರಬೇತಿ ನೀಡಿದ್ದೇನೆ. ಅನುಭವ ಬಳಸಿಕೊಂಡು ಸ್ಥಳೀಯ ಕ್ರೀಡಾ ಪ್ರತಿಭೆಗಳನ್ನು ಬೆಳಕಿಗೆ ತರುವ ಉದ್ದೇಶವಿದೆ. ಮುಂದಿನ ವರ್ಷ ಶಿರಸಿಯಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪಿಸಬೇಕು ಎಂಬ ಕನಸನ್ನೂ ಹೊಂದಿದ್ದೇನೆ’ ಎಂದರು.