ಶಿರಸಿ: ಸಮಾಜವನ್ನು ಸಂಘಟಿಸುವ ಉದ್ದೇಶ ಹಾಗೂ ಲೋಕ ಕಲ್ಯಾಣಾರ್ಥವಾಗಿ ರಾಜ್ಯಮಟ್ಟದ ನಾರಾಯಣಗುರು ಧಾರ್ಮಿಕ ಸಮಾವೇಶ ಹಾಗೂ ವಿಶ್ವಶಾಂತಿ ಯಾಗವನ್ನು ಜ.9 ರಂದು ಸಾಗರದ ಈಡಿಗರ ಭವನದಲ್ಲಿ ಆಯೋಜಿಸಲಾಗಿದೆ ಎಂದು ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸೈದಪ್ಪ ಗುತ್ತೇದಾರ್ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಡಿಗ, ನಾಮಧಾರಿ, ಬಿಲ್ಲವ ಸೇರಿದಂತೆ 26 ಒಳಪಂಗಡಗಳ ಜನರನ್ನು ಸೇರಿಸಿ ಅವರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಲು, ಸಮಾಜದಲ್ಲಿ ಹಿಂದುಳಿದ ವರ್ಗಗಳಿಗೆ ಧ್ವನಿಯಾಗುವ ಸಮಾವೇಶ ಇದಾಗಲಿದೆ. ಹಿಂದುಳಿದ ವರ್ಗಕ್ಕೆ ಸೇರಿದ 501 ಅರ್ಚಕರಿಂದ (ಶಾಂತಿಗಳು) ವಿಶ್ವಶಾಂತಿ ಯಾಗ ನಡೆಯಲಿದೆ’ಎಂದರು.
‘ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವು ರಾಜಕೀಯ ನಾಯಕರು, ಗೌರಿಗದ್ದೆಯ ಅವಧೂತ ವಿನಯ ಗುರೂಜಿ ಸೇರಿದಂತೆ ಹಲವು ಸ್ವಾಮೀಜಿಗಳು, ಸಾಮಾಜಿಕ ಕ್ಷೇತ್ರದ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.
‘ಸಮಾಜದ ಎಲ್ಲ ದೇವಸ್ಥಾನಗಳಿಗೆ ರಾಜ್ಯ ಬಜೆಟ್ನಲ್ಲಿ ಅನುದಾನ ಮೀಸಲಿಡಬೇಕು. ಕೋಟಿ ಚೆನ್ನಯ್ಯದ 266 ಗರಡಿಗಳಿಗೆ ಹಾಗೂ ದೇವಸ್ಥಾನಗಳಿಗೆ ಜಮೀನು ದಾಖಲೆ ಪತ್ರ ನೀಡಬೇಕು. ಬ್ರಹ್ಮ ವಿದ್ಯಾಲಯ ಸ್ಥಾಪನೆಗೆ ಜಾಗ ಮಂಜೂರು ಸೇರಿದಂತೆ ಹಲವು ಬೆಡಿಕೆಗಳನ್ನು ಸಮಾವೇಶದ ಮೂಲಕ ಸರ್ಕಾರದ ಮುಂದಿಡಲಾಗುವದು’ ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಕಾಂತರಾಜ್ ಆರ್ಯ, ಲೋಹಿತ ನಾಯ್ಕ, ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ ನಾಯ್ಕ, ಶಿರಸಿ ತಾಲ್ಲೂಕು ಘಟಕದ ಅಧ್ಯಕ್ಷ ಶಶಿಕಾಂತ ನಾಯ್ಕ ಅಂಡಗಿ, ಸುರೇಶ ನಾಯ್ಕ ಕ್ಯಾದಗಿಕೊಪ್ಪ, ದಿನೇಶ ನಾಯ್ಕ ನೀರ್ನಳ್ಳಿ, ಆತ್ಮಾನಂದ ಕೊಪ್ಪ ಇದ್ದರು.