ಗೋಕರ್ಣ: ಇಲ್ಲಿ ನೆಲೆಸಿರುವ ಪರಮೇಶ್ವರ ದೇವರು ಮತ್ತು ಬೆಸ್ತರ ಕನ್ಯೆ ಗಂಗೆಯ ವಿವಾಹ ನಿಶ್ಚಿತಾರ್ಥದ ಸಾಂಪ್ರದಾಯಿಕ ಕಾರ್ಯಕ್ರಮವು ನ.9ರಂದು ನೆರವೇರಲಿದೆ.
ಸಮೀಪದ ಗಂಗಾವಳಿಯಲ್ಲಿರುವ ಗಂಗಾಮಾತಾ ದೇವಾಲಯದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಬೆಳಿಗ್ಗೆ 5.30ರಿಂದ 7 ಗಂಟೆಯ ಅವಧಿಯಲ್ಲಿ ಬರುವ ಗಂಗಾಷ್ಟಮಿಯ ಪರ್ವಕಾಲದಲ್ಲಿ ನಿಶ್ಚಿತಾರ್ಥವು ನಡೆಯಲಿದೆ. ಪುರೋಹಿತರು ಶಿವಗಂಗೆಯರ ಸಂವಾದವನ್ನು ಸಂಸ್ಕೃತ ಮತ್ತು ಕನ್ನಡದಲ್ಲಿ ಭಕ್ತರಿಗೆ ತಿಳಿಸಲಿದ್ದಾರೆ.
ನ.8ರಂದು ರಾತ್ರಿ ಸುಮಾರು 12 ಗಂಟೆಗೆ ಮಹಾಬಲೇಶ್ವರ ದೇವಾಲಯದಿಂದ, ದೇವರ ಉತ್ಸವದ ಮೆರವಣಿಗೆಯು ಗಂಗಾವಳಿಗೆ ಹೋಗಲಿದೆ. ಬೆಳಿಗ್ಗೆ ಸೂರ್ಯೋದಯಕ್ಕೂ ಮೊದಲೇ ನದಿಯಲ್ಲಿ ಸ್ನಾನ ಮಾಡಿ ಗಂಗಾಮಾತಾ ದೇವಾಲಯಕ್ಕೆ ಉತ್ಸವವು ಸಾಗುತ್ತದೆ. ಆ ಸಮಯದಲ್ಲಿ ಗಂಗೆಯ ಉದ್ಭವ ಆಗುವುದು ವಿಶೇಷವಾಗಿರುತ್ತದೆ. ಸೇರಿದ ಭಕ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥದ ತಾಂಬೂಲೋತ್ಸವವು ನೆರವೇರುತ್ತದೆ.
ಶಿವನ ಭಕ್ತರು, ಗಂಗಾಮಾತೆಯ ಕುಲಪುತ್ರರು, ಮೀನುಗಾರ ಸಮಾಜದವರು ಹಾಗೂ ಅಂಬಿಗ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರುತ್ತಾರೆ. ಕೋವಿಡ್ 19 ಸಂಬಂಧ ಸರ್ಕಾರದ ನಿಯಮಾವಳಿಯಂತೆ ಈ ಉತ್ಸವವು ಸರಳವಾಗಿ, ಸೀಮಿತ ಜನರ ನಡುವೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.