ಮುಂಡಗೋಡ: ಬಿಜೆಪಿ ಎಂದೂ ಬತ್ತದ ಗಂಗಾಜಲವಿದ್ದಂತೆ. ಎಷ್ಟು ನೀರನ್ನು ಹೊರತೆಗೆಯುತ್ತೆವೆಯೋ, ಅಷ್ಟು ನೀರು ಮತ್ತೆ ಉತ್ಪತ್ತಿಯಾಗುತ್ತದೆ. ಯಾರೊ ಮೂರ್ನಾಲ್ಕು ಜನರನ್ನು ಕರೆದುಕೊಂಡು ಹೋದರೆ, ತಾಲ್ಲೂಕಿನಲ್ಲಿ ಬಿಜೆಪಿ ಶಕ್ತಿ ಅಡಗಿಸಬಹುದು ಎಂದು ಕೆಲವರು ಅಂದುಕೊಂಡಿದ್ದರು. ಅವರಿಗೆ ಬಿಜೆಪಿಯ ಶಕ್ತಿ ಏನು ಎಂಬುದು ಮುಂದಿನ ದಿನಗಳಲ್ಲಿ ಅರ್ಥವಾಗಲಿದೆ’ ಎಂದು ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ ಹೇಳಿದರು.
ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ನಡೆದ ಡಾ.ಅಂಬೇಡ್ಕರ್ ಜಯಂತ್ಯುತ್ಸವ ಹಾಗೂ ನೂತನ ಪದಾಧಿಕಾರಿಗಳ ನೇಮಕ ಸಭೆಯಲ್ಲಿ ಮಾತನಾಡಿದರು.
‘ಇರುವಂತಹ ಕೆಲವೇ ದಿನಗಳಲ್ಲಿ, ಪಕ್ಷದ ಅಭ್ಯರ್ಥಿಗೆ ಈ ತಾಲ್ಲೂಕಿನಿಂದ ಗರಿಷ್ಠ ಮತವನ್ನು ಕೊಡಿಸುವ ಮಹತ್ತರ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ’ ಎಂದರು.
‘ಡಾ.ಅಂಬೇಡ್ಕರ್ ಅವರ ತತ್ವ, ಸಿದ್ದಾಂತ ಹಾಗೂ ರಾಷ್ಟ್ರವಾದವನ್ನು ನಾವು ಸ್ಮರಿಸಿಕೊಳ್ಳಬೇಕು. ಅವರು ಕೊಟ್ಟಂತ ಸಂವಿಧಾನದಿಂದ ನಾವು ಪ್ರಶ್ನೆ ಮಾಡುವ ಹಕ್ಕನ್ನು ಪಡೆದುಕೊಂಡಿದ್ದೇವೆ. ಭಾರತ ಭಾರತವಾಗಿ ಉಳಿಯಬೇಕು. ನನ್ನ ಜನರು ಸ್ವಾಭಿಮಾನಿಗಳಾಗಬೇಕು ಎಂದು ಅಂಬೇಡ್ಕರ್ ಬಯಸಿದ್ದರು. ಅದನ್ನು ಸಾಕಾರ ಮಾಡಲು ನಾವೆಲ್ಲರೂ ಪಣ ತೊಡಬೇಕು’ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎಲ್.ಟಿ.ಪಾಟೀಲ ಮಾತನಾಡಿ, ಪಕ್ಷದಲ್ಲಿದ್ದುಕೊಂಡು ಎಲ್ಲವನ್ನೂ ಅನುಭವಿಸಿ, ಯಾವ ಕಾರಣದಿಂದ ಪಕ್ಷ ಬಿಟ್ಟು ಹೋಗಿದ್ದಾರೆ ಎಂಬುದು ಗೊತ್ತಿಲ್ಲ. ಬಿಜೆಪಿ ಪಕ್ಷದ ಸಂಘಟನೆ ತಾಲ್ಲೂಕಿನಲ್ಲಿ ಉತ್ತಮವಾಗಿದ್ದು, ಕಾರ್ಯಕರ್ತರ ರಕ್ಷಣೆಗೆ ಮುಖಂಡರು ಬದ್ಧರಿದ್ದೇವೆ’ ಎಂದರು.
ಮಂಡಲ ಅಧ್ಯಕ್ಷ ಮಂಜುನಾಥ ಪಾಟೀಲ, ಗುರುಪ್ರಸಾದ ಹೆಗಡೆ, ಜಿ.ಎನ್.ಗಾಂವಕರ, ರವಿ ಹಾವೇರಿ, ತುಕಾರಾಮ ಇಂಗಳೆ, ಬಿ.ಎಂ.ರಾಯ್ಕರ, ಸಂತೋಷ ತಳವಾರ, ವಿಠ್ಠಲ ಬಾಳಂಬೀಡ, ಬಸವರಾಜ ತನಖೆದಾರ ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಇದ್ದರು.