ಕಾರವಾರ: ‘ಮಹಾರಾಷ್ಟ್ರದ ಲಾತೂರ್ ಜಿಲ್ಲೆಯವರಾದ, ರಾಜಕೀಯ ಅಸ್ತಿತ್ವಕ್ಕೆ ಖಾನಾಪುರದಲ್ಲಿ ನೆಲೆಸಿದ ಡಾ.ಅಂಜಲಿ ನಿಂಬಾಳ್ಕರ್ ಅವರನ್ನು ಕಣಕ್ಕಿಳಿಸಿ ಕಾಂಗ್ರೆಸ್ ಆಮದು ಅಭ್ಯರ್ಥಿಗಳನ್ನು ನಿಲ್ಲಿಸುವ ಪರಂಪರೆ ಮುಂದುವರೆಸಿದೆ’ ಎಂದು ಬಿಜೆಪಿ ಅಭ್ಯರ್ಥಿ ಪ್ರತಿನಿಧಿ ನಾಗರಾಜ ನಾಯಕ ಆರೋಪಿಸಿದರು.
‘ಡಾ.ಅಂಜಲಿ ಅವರ ಪತಿಯೂ ಕರ್ನಾಟಕದವರಲ್ಲ. ಐ.ಪಿ.ಎಸ್ ಅಧಿಕಾರಿಯಾಗಿರುವ ಅವರು ಬೆಳಗಾವಿಯಲ್ಲಿ ಕಾರ್ಯನಿರ್ವಹಿಸುವ ವೇಳೆ ಇಬ್ಬರೂ ಖಾನಾಪುರದಲ್ಲಿ ನೆಲೆನಿಂತರು. ಖಾನಾಪುರದಲ್ಲಿ ಮನೆ, ಜಮೀನು ಖರೀದಿಸಿ ನೆಲೆನಿಂತ ಅವರು ಅಲ್ಲಿ ಒಮ್ಮೆ ಚುನಾವಣೆ ಗೆದ್ದರೂ ಜನರ ಕೈಗೆ ಸಿಕ್ಕಿದ್ದು ಅಪರೂಪ. ಇದೇ ಕಾರಣಕ್ಕೆ ಖಾನಾಪುರದ ಜನ 2023ರ ವಿಧಾನಸಭೆ ಚುನಾವಣೆಯಲ್ಲಿ 54 ಸಾವಿರ ಮತಗಳ ಅಂತರದಿಂದ ಸೋಲಿಸಿದರು’ ಎಂದು ಗುರುವಾರ ಇಲ್ಲಿ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದರು.
‘1951 ರಿಂದಲೂ ಹಲವು ಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲೆಯವರಲ್ಲದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜಿಲ್ಲೆಯ ಭೌಗೋಳಿಕತೆಯ ಅರಿವಿಲ್ಲದ, ಸಮಸ್ಯೆಗಳ ಬಗ್ಗೆ ಅರಿಯದವರನ್ನು ಅಭ್ಯರ್ಥಿಯಾಗಿಸಿ ಮತದಾರರನ್ನು ವಂಚಿಸುವ ಕೆಲಸವನ್ನು ಆ ಪಕ್ಷ ಮಾಡಿದೆ’ ಎಂದು ದೂರಿದರು.