ಕಾರವಾರ: ಇಲ್ಲಿನ ಕಾರವಾರ–ಕೋಡಿಬಾಗ ರಸ್ತೆಯಲ್ಲಿ ಹೆಂಜಾ ನಾಯ್ಕ ವೃತ್ತ ನಿರ್ಮಿಸುವ ಕೆಲಸವನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಕರುನಾಡು ರಕ್ಷಣಾ ವೇದಿಕೆ ನಗರಸಭೆ ಪೌರಾಯುಕ್ತ ಉದಯಕುಮಾರ ಶೆಟ್ಟಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿ ಆಗ್ರಹಿಸಿದೆ.
‘ಕಳೆದ ಕೆಲವು ತಿಂಗಳುಗಳ ಹಿಂದೆಯೇ ಹೆಂಜಾ ನಾಯ್ಕ ವೃತ್ತ ನಿರ್ಮಿಸುವ ಭರವಸೆ ನೀಡಲಾಗಿತ್ತು. ಫೆಬ್ರವರಿಯಲ್ಲಿ ವೃತ್ತ ನಿರ್ಮಿಸುವ ಕಾಮಗಾರಿ ಆರಂಭಿಸುವಂತೆ ಗುತ್ತಿಗೆ ಪಡೆದ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಆದರೆ ಈವರೆಗೆ ಕೆಲಸ ಆರಂಭಿಸಿಲ್ಲ’ ಎಂದು ಆರೋಪಿಸಿದರು.
‘ಕಾರವಾರ–ಕೋಡಿಬಾಗ ರಸ್ತೆಗೆ ಬ್ರಿಟೀಷರ ವಿರುದ್ಧ ಹೋರಾಡಿದ್ದ ಹೆಂಜಾ ನಾಯ್ಕ ಅವರ ಹೆಸರನ್ನು ಶೀಘ್ರ ನಾಮಕರಣ ಮಾಡಬೇಕು. ವೃತ್ತ ನಿರ್ಮಿಸುವ ಕೆಲಸವೂ ಮುಂದಿನ ಹದಿನೈದು ದಿನದೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.