ಜೊಯಿಡಾ:ಜೇನು ಸಾಕಣೆ ಮತ್ತು ಅದರಿಂದ ಆದಾಯ ಗಳಿಸುವ ವಿಧಾನದ ಕುರಿತು ತಾಲ್ಲೂಕಿನ ಡೇರಿಯಾ ಗ್ರಾಮದಲ್ಲಿ ಸೋಮವಾರ ‘ಜೇನು ಹಬ್ಬ’ ಆಚರಿಸಲಾಯಿತು. ಪೆಟ್ಟಿಗೆಗಳಿಂದ ಜೇನು ತೆಗೆಯುವಪ್ರಾತ್ಯಕ್ಷಿಕೆಯನ್ನುಗ್ರಾಮಸ್ಥರಿಗೆ ತೋರಿಸಲಾಯಿತು.
ಶಿರಸಿಯ ಪ್ರಕೃತಿ ಸಂಸ್ಥೆ ಮತ್ತು ಡೇರಿಯಾದ ಜೇನು ಸಾಕಣಿಕೆದಾರರ ಸಂಘದ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಡೇರಿಯಾ, ಕಾಟೇಲ, ವಾಗಬಂಧ, ಮುಡಿಯಾ, ಗೋಡಶೇಡ, ಮೈನೋಳ ಮತ್ತು ಲಾಂಡೆ ಗ್ರಾಮದ ಜೇನು ಕೃಷಿಕರು ಭಾಗವಹಿಸಿದ್ದರು.
ಜೇನು ಸಾಕಣೆಯನ್ನು ವೈಜ್ಞಾನಿಕವಾಗಿ ಮತ್ತು ಲಾಭದಾಯಕವಾಗಿ ಮಾಡುವ ಬಗ್ಗೆ ಪ್ರಕೃತಿ ಸಂಸ್ಥೆಯ ಪಾಂಡುರಂಗ ಹೆಗಡೆ ಮಾಹಿತಿ ನೀಡಿದರು. ಜೇನು ಸಾಕಣೆದಾರ ಯಲ್ಲಾಪುರದ ಧರ್ಮೇಂದ್ರ ಹೆಗಡೆ ಜೇನು ಹುಳಗಳನ್ನು ವೃದ್ಧಿಸಿಕೊಳ್ಳುವುದು ಹಾಗೂ ಅವುಗಳ ರಕ್ಷಣೆಯ ಬಗ್ಗೆ ತಿಳಿಸಿದರು. ತಾಲ್ಲೂಕು ಕುಣಬಿ ಸಮಾಜದ ಅಧ್ಯಕ್ಷ ಜಯಾನಂದ ಡೇರೇಕರ್, ಅರಣ್ಯದ ನಡುವೆ ಕೃಷಿಯೊಂದಿಗೆ ಜೇನು ಸಾಕಣೆಗೆ ಇರುವ ಅವಕಾಶಗಳನ್ನು ವಿವರಿಸಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿಯ ಬಳಿ ಎರಡು ಜೇನು ಪೆಟ್ಟಿಗೆಗಳನ್ನು ಎರಡು ತಿಂಗಳ ಹಿಂದೆ ಇಡಲಾಗಿತ್ತು. ಅವುಗಳಲ್ಲಿ ಸಂಗ್ರಹವಾದ ಜೇನನ್ನು ತೆಗೆದು ಗ್ರಾಮಸ್ಥರಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು.
ಜಿಲ್ಲಾ ಪಂಚಾಯ್ತಿ ಸದಸ್ಯ ರಮೇಶ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ಜೇನು ಕೃಷಿಕ ಆರ್.ಜಿ.ಹೆಗಡೆ, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ನಿವೃತ್ತಿ ಪ್ರಾಧ್ಯಾಪಕಿ ಆರ್.ಪೂರ್ಣಿಮಾ, ಗ್ರಾಮದ ಹಿರಿಯ ನಾನಾ ಡೇರೇಕರ್, ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆರ್.ಪಿ.ಹೆಗಡೆ ವಂದಿಸಿದರು.