ಶಿರಸಿ: ಅರಣ್ಯ ಅತಿಕ್ರಮಣದಾರರ ಅರ್ಜಿ ವಿಚಾರಣೆಯನ್ನು ಅರಣ್ಯಹಕ್ಕು ಸಮಿತಿಯು ನಾಮನಿರ್ದೇಶಿತ ಸದಸ್ಯರಿಲ್ಲದೆ ನಡೆಸುತ್ತಿರುವುದಕ್ಕೆಅರಣ್ಯ ಭೂಮಿ ಹಕ್ಕು ಹೋರಾಟಗಾರರ ನಿಯೋಗ ಆಕ್ಷೇಪಿಸಿದೆ.
ಉಪವಿಭಾಗಮಟ್ಟದ ಸಮಿತಿ ಅಧ್ಯಕ್ಷರಾದ ಇಲ್ಲಿನ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಅವರನ್ನು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದ ನಿಯೋಗ ಭೇಟಿ ಮಾಡಿ ತಾತ್ಕಾಲಿಕವಾಗಿ ವಿಚಾರಣೆ ನಿಲ್ಲಿಸುವಂತೆ ಒತ್ತಾಯಿಸಿತು.
‘ಅರಣ್ಯ ಹಕ್ಕು ಕಾಯಿದೆಗೆ ವ್ಯತಿರಿಕ್ತವಾಗಿ ವಿಚಾರಣೆ ನಡೆಯುತ್ತಿದೆ.ಆರು ಸದಸ್ಯರಿರುವ ಜಿಲ್ಲಾ ಮತ್ತು ಉಪವಿಭಾಗ ಅರಣ್ಯ ಹಕ್ಕು ಸಮಿತಿಯಲ್ಲಿ ನಾಮನಿರ್ದೇಶಿತ ಸದಸ್ಯರ ಅನುಪಸ್ಥಿಯಲ್ಲಿ ಅರ್ಜಿ ವಿಲೇವಾರಿ ಮಾಡಬಹುದೆಂಬ ರಾಜ್ಯ ಬುಡಕಟ್ಟು ಇಲಾಖೆ ಆ.31ಕ್ಕೆ ಹೊರಡಿಸಿದ ಆದೇಶ ಕಾನೂನು ಬಾಹೀರ’ ಎಂದು ರವೀಂದ್ರ ನಾಯ್ಕ ಆಕ್ಷೇಪಿಸಿದರು.
‘ಪಾರಂಪರಿಕ ಅರಣ್ಯ ವಾಸಿಗಳ ಅರ್ಜಿ ಮಂಜೂರಿಗೆ ಸಂಬಂಧಿಸಿ ನಿರ್ದಿಷ್ಟ ದಾಖಲೆ ಸಲ್ಲಿಸುವಂತೆ ಒತ್ತಡ ಹೇರುವಂತಿಲ್ಲ. ಅರಣ್ಯ ವಾಸಿಗಳ ಸಾಗುವಳಿ ಕ್ಷೇತ್ರದ ಪರಿಸರ ಮೂರು ತಲೆಮಾರಿನ ಜನವಸತಿ ಪ್ರದೇಶ ಎಂದು ಪುರಾವೆ ಮಾಡಿದರೆ ಸಾಕು ಎಂಬ ಕೇಂದ್ರ ಬುಡಕಟ್ಟು ಮಂತ್ರಾಲಯವೇ ಆದೇಶಿಸಿದೆ’ ಎಂದು ಪ್ರತಿಪಾದಿಸಿದರು.
‘ಅರಣ್ಯ ಹಕ್ಕು ಕಾಯ್ದೆ ಅರಣ್ಯವಾಸಿಗಳ ಪರವಾಗಿ ಇದೆ. ನ್ಯಾಯಬದ್ಧ ಕ್ರಮದ ಕುರಿತು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವದು’ ಎಂದು ುಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಪ್ರತಿಕ್ರಿಯಿಸಿದರು.