ಕಾರವಾರ: ‘ಶಿವ ಶರಣರು, ವಚನಕಾರರು ಸಮಾಜದ ಶಾಶ್ವತ ಆಸ್ತಿ. ಸಾಮಾಜಿಕ ಅಸಮಾನತೆ ಹೋಗಲಾಡಿಸುವ ಜತೆಗೆ ಜ್ಞಾನ ವಿಸ್ತರಣೆಗೆ ಅವರು ನೀಡಿದ ಕೊಡುಗೆ ಮಹತ್ತರವಾದುದು’ ಎಂದು ಉಪವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ವಿಶಾಲ ಮನೋಧರ್ಮ ಮಡಿವಾಳ ಸಮುದಾಯದ ಜನರಲ್ಲಿದೆ. ಶಿವಶರಣ ಮಾಚಿದೇವರ ಮಾರ್ಗದರ್ಶನದಿಂದ ಮುನ್ನಡೆಯುತ್ತಿರುವುದೇ ಇದಕ್ಕೆ ಕಾರಣ. ಮಾಚಿದೇವ ಸಮಾಜದ ಕೊಳಕು ತೊಳೆದು ಹಾಕಿದವರು. ಕಾಯಕದ ಆಧಾರದಲ್ಲಿ ವಿಭಜನೆ ಆಗುತ್ತಿರುವ ಸಮಾಜಕ್ಕೆ ಮಾಚಿದೇವರ ಸಂದೇಶ ಆದರ್ಶವಾಗಬೇಕಾದ ಅಗತ್ಯವಿದೆ’ ಎಂದರು.
ಉಪನ್ಯಾಸ ನೀಡಿದ ಶಿಕ್ಷಕ ಗಣೇಶ ಭಿಷ್ಠಣ್ಣನವರ್, ‘ಮೌಢ್ಯಗಳಿಂದ ದೀನರ ಶೋಷಣೆ ನಡೆಯುತ್ತಿದ್ದ ಕಾಲದಲ್ಲಿ ಮಾಚಿದೇವ ಜಾಗೃತಿಯ ಮೂಲಕ ಶೋಷಣೆ ತಡೆಗಟ್ಟಿದರು. ಕಷ್ಟಗಳನ್ನು ಸಹಿಸಿಯೂ ಬಡ ಜನರ ಉದ್ಧಾರಕ್ಕೆ ಮಾರ್ಗದರ್ಶಕರಾದರು’ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಮಚಂದ್ರ ಮಡಿವಾಳ, ‘ಮಾಚಿದೇವ ಸಮಾಜದ ಶ್ರೇಷ್ಠ ವಚನಕಾರರಲ್ಲಿ ಒಬ್ಬರು’ ಎಂದರು.
ಮಡಿವಾಳ ಸಮಾಜದ ಅಧ್ಯಕ್ಷ ಶಾಂತಾ ಮಡಿವಾಳ, ಶಿಕ್ಷಕ ಮಹಾದೇವ ರಾಣೆ ಇದ್ದರು.
ಮಡಿವಾಳ ಸಮಾಜಕ್ಕೆ ಸಮುದಾಯ ಭವನ ನಿರ್ಮಿಸುವಂತೆ ಸಮುದಾಯದ ಪ್ರಮುಖರು ಉಪವಿಭಾಗಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.