ಶಿರಸಿ: ಇತಿಹಾಸದ ಅರಿವು, ಭವಿಷ್ಯತ್ತಿನ ಆಲೋಚನೆ ಸ್ಪಷ್ಟವಾಗಿ ತಿಳಿಯುವ ಸಾಮರ್ಥ್ಯ ಇದ್ದಾಗ ಕಾವ್ಯ ರಚನೆ ವಸ್ತುನಿಷ್ಠವಾಗಿರುತ್ತದೆ ಎಂದು ಪತ್ರಕರ್ತ ಅಶೋಕ ಹಾಸ್ಯಗಾರ ಹೇಳಿದರು.
ತಾಲ್ಲೂಕಿನ ಹುಲೇಕಲ್ ಶ್ರೀದೇವಿ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಅಂಕುರ ಸಾಹಿತ್ಯ ವೇದಿಕೆ ಆಯೋಜಿಸಿದ್ದ ‘ಅಂಕುರ ಕವನ ಸಂಕಲನ’ ಬಿಡುಗಡೆ ಹಾಗೂ ರಾಜ್ಯಮಟ್ಟದ ಕವನ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
‘ಕವನ ರಚಿಸುವವರಿಗೆ ಶಬ್ದಗಳ ಅರ್ಥ ಗೊತ್ತಿರಬೇಕು. ವಿಚಾರ ಸ್ಪಷ್ಟತೆ ಇರಬೇಕು. ಕಾವ್ಯಕ್ಕೆ ಧ್ವನಿ ಇರಬೇಕು. ವಿದ್ಯಾರ್ಥಿಗಳ ಪ್ರತಿಭೆ ಬೆಳಕಿಗೆ ತರಲು ಅಂಕುರ ಸಾಹಿತ್ಯ ವೇದಿಕೆ ಶ್ರಮಿಸುತ್ತಿರುವುದು ಮಾದರಿಯಾಗಿದೆ’ ಎಂದರು.
ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ, ‘ವ್ಯಾವಹಾರಿಕತೆಯ ಜೀವನ ಯಾಂತ್ರಿಕತೆ ಸೃಷ್ಟಿಸುತ್ತದೆ. ಅಕ್ಷರಪ್ರೀತಿ, ಸಾಹಿತ್ಯಿಕ ಚಟುವಟಿಕೆ ಮನುಷ್ಯತ್ವ ಗೌರವಿಸುವ ಪ್ರವೃತ್ತಿ ಬೆಳೆಸುತ್ತದೆ. ಒಳ್ಳೆಯದನ್ನು ಅರಸುವುದು ಕೃತಿಕಾರನ ಕೆಲಸವಾಗುತ್ತದೆ. ಅದು ಆತನಿಗೆ ಬೆಳಕು ಶೋಧಕ್ಕೆ ದಾರಿಯಾಗುತ್ತದೆ’ ಎಂದರು.
ಶ್ರೀದೇವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಎನ್.ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಕ.ಸಾ.ಪ. ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ಭಾಗವತ, ಶಾಂತಾರಾಮ ಹೆಗಡೆ, ಎಂ.ವಿ.ಹೆಗಡೆ ಅಮಚಿಮನೆ, ಅಂಕುರ ಸಾಹಿತ್ಯ ವೇದಿಕೆ ಸಂಚಾಲಕ ಮೋಹನ ಭರಣಿ ಇದ್ದರು. ಪ್ರಾಚಾರ್ಯ ಡಿ.ಆರ್.ಹೆಗಡೆ ಸ್ವಾಗತಿಸಿದರು.