ಶಿರಸಿ: ಜಿಟಿಜಿಟಿ ಸುರಿಯುವ ಮಳೆಯಲ್ಲೂ ಚಪ್ಪರ ಕಟ್ಟುವ, ಮಂಟಪ ತಯಾರಿಸುವ, ಬಣ್ಣದ ಬ್ಯಾಗಡೆ ಅಂಟಿಸುವ ಕಾರ್ಯ ತಾಲ್ಲೂಕಿನಲ್ಲಿ ಜೋರಾಗಿ ನಡೆದಿದೆ. ಗಣೇಶ ಚತುರ್ಥಿ ಹಬ್ಬಕ್ಕೆ (ಸೆ.02) ಎರಡು ದಿನಬಾಕಿಯಿವೆ.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗಣೇಶನ ಮೂರ್ತಿಗೆ ಅಂತಿಮ ಸ್ಪರ್ಶ ನೀಡುವ ಕೆಲಸ ಭರಾಟೆಯಲ್ಲಿ ಸಾಗಿದೆ. ಕಲಾಕಾರರಿಗೆ ಈಗ ಬಿಡುವಿಲ್ಲದ ಕೆಲಸ. ಗಣೇಶೋತ್ಸವ ಮಂಡಳಿಗಳು ಪೆಂಡಾಲ್ ಕಟ್ಟಿ, ಮಂಟಪ ಶೃಂಗರಿಸಿ, ಏಕದಂತನನ್ನು ತಂದು ಪ್ರತಿಷ್ಠಾಪಿಸಲು ಸಿದ್ಧತೆ ನಡೆಸಿವೆ. ತಾಲ್ಲೂಕಿನಲ್ಲಿ ಒಟ್ಟು 193 ಕಡೆಗಳಲ್ಲಿ ಸಾರ್ವಜನಿಕ ಗಣಪತಿ ಪ್ರತಿಷ್ಠಾಪಿಸಲಾಗುತ್ತದೆ.
ಹಳ್ಳಿಗರಿಗೆ ದೀಪಾವಳಿ ದೊಡ್ಡ ಹಬ್ಬವಾದರೂ, ಹೆಚ್ಚು ಖುಷಿಯನ್ನು ಹಂಚುವುದು ಗಣೇಶ ಚತುರ್ಥಿ. ಜನರ ನಡುವಿನ ಸಣ್ಣ–ಪುಟ್ಟ ವೈಮನಸ್ಸನ್ನು ಅಳಿಸುವ ಶಕ್ತಿ ಗಣೇಶನಿಗಿದೆ. ಊರಿನ ಹಿರಿಯರು, ಯುವಕರು ಒಂದೆಡೆ ಸೇರಿ ವಾರದ ಮೊದಲಿನಿಂದ ಸಾರ್ವಜನಿಕ ಗಣಪತಿ ಕೂಡಿಸುವ ಸ್ಥಳವನ್ನು ಅಣಿಗೊಳಿಸುತ್ತಾರೆ. ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಹಬ್ಬದ ಸಿದ್ಧತೆಗೆ ಸಣ್ಣ ತೊಡಕಾಗಿದೆ.
ತಾಲ್ಲೂಕಿನ ಹುಲೇಕಲ್ ಅಂಚೆ ಕಚೇರಿಯ ಪೋಸ್ಟ್ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿರುವ ಗಜಾನನ ಶೇಟ್ ಅವರು 15 ವರ್ಷಗಳಿಂದ ಗಣಪತಿ ಮೂರ್ತಿ ತಯಾರಿಸುತ್ತಿದ್ದಾರೆ. ‘ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ರಾಸಾಯನಿಕ ಬಣ್ಣ ಬಳಸಬಾರದೆಂದು ಹೇಳುತ್ತಿದೆ. ಮಣ್ಣಿನ ಮೂರ್ತಿ ಗ್ರಾಹಕರನ್ನು ಸೆಳೆಯುವುದಿಲ್ಲ. ಹೀಗಾಗಿ ಸರ್ಕಾರವೇ ರಾಸಾಯನಿಕರಹಿತ ಬಣ್ಣ ಪೂರೈಸಲು ಯೋಚಿಸಬೇಕು’ ಎಂಬುದು ಅವರ ಸಲಹೆ.
ನಗರದ ದೇವಿಕೆರೆ, ಝೂ ವೃತ್ತ, ಮಾರಿಗುಡಿ, ಶಿವಾಜಿಚೌಕ, ಡ್ರೈವರ್ ಕಟ್ಟೆ, ಮಾರ್ಕೆಟ್, ರಾಯರಪೇಟೆ, ಸಿಂಪಿಗಲ್ಲಿ, ಉಣ್ಣೇಮಠ ಗಲ್ಲಿ, ಬಾಪೂಜಿ ನಗರ, ಟಿಎಸ್ಎಸ್ ರಸ್ತೆ, ಹನುಮಗಿರಿ, ಮರಾಠಿಕೊಪ್ಪ ಮೊದಲಾದ ಕಡೆಗಳಲ್ಲಿ ಸಾರ್ವಜನಿಕ ಗಣೇಶನನ್ನು ಪ್ರತಿಷ್ಠಾಪಿಸಲು ಮಂಟಪಗಳು ತಲೆಯೆತ್ತಿವೆ. ನಗರದಲ್ಲಿ 15ಕ್ಕೂ ಹೆಚ್ಚು ಗುಡಿಗಾರರು ಮೂರ್ತಿ ತಯಾರಿಕೆಯಲ್ಲಿ ನಿರತರಾಗಿದ್ದಾರೆ. ಸೆ.1ರಂದು ನಡೆಯುವ ಗೌರಿ ಹಬ್ಬಕ್ಕೆ ಮನೆ–ಮನೆ ಹೋಗಲು ಗೌರಿ ಸಿದ್ಧಳಾಗಿದ್ದಾಳೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.