ಕಾರವಾರ: ‘ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಯಾರಾಗುವರು ಎಂಬುದನ್ನು ಪಕ್ಷ ಈಗಲೇ ನಿರ್ಣಯಿಸಲ್ಲ. ಪಕ್ಷದ ಸಿದ್ಧಾಂತಕ್ಕೆ ಸೂಕ್ತವಲ್ಲದವರನ್ನು ಅಭ್ಯರ್ಥಿ ಆಗಿಸುವುದಿಲ್ಲ. ಅಂತಹ ಸಂದರ್ಭ ಬಂದರೆ, ಸೂಕ್ತ ವೇದಿಕೆಯಲ್ಲಿ ವಿರೋಧಿಸುವೆ’ ಎಂದು ಹಳಿಯಾಳ ಶಾಸಕ, ಕಾಂಗ್ರೆಸ್ ಮುಖಂಡ ಆರ್.ವಿ.ದೇಶಪಾಂಡೆ ಹೇಳಿದರು.
ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಸೇರಿ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾಗುವ ವಿಷಯಕ್ಕೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಪಕ್ಷಕ್ಕೆ ಬರುವವರು ಪಕ್ಷದ ತತ್ವ, ಸಿದ್ಧಾಂತ ಅರಿತಿರಬೇಕು. ಬದ್ಧತೆಯುಳ್ಳವರನ್ನೇ ಪಕ್ಷಕ್ಕೆ ಬರಮಾಡಿಕೊಳ್ಳಬೇಕು’ ಎಂದರು.
‘ಬಿಜೆಪಿ ಜೆಡಿಎಸ್ ಮೈತ್ರಿಯಾದರೆ, ಕಾಂಗ್ರೆಸ್ಗೆ ಲಾಭವಾಗಲಿದೆ. ಜಾತ್ಯತೀತ ನಿಲುವಿನ ಪಕ್ಷ ಎಂದು ಹೇಳಿಕೊಳ್ಳುತ್ತಿದ್ದ ಜೆಡಿಎಸ್ನ ನಿಲುವು ಈಗ ಬಯಲಾಗಿದೆ’ ಎಂದು ಅವರು ವ್ಯಂಗ್ಯವಾಡಿದರು.