ಕಾರವಾರ: 'ಹೆಚ್ಚು ಬಾರಿ ಬಜೆಟ್ ಮಂಡಿಸಿದ ಹೆಗ್ಗಳಿಕೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದು ಅಲ್ಪ ಸಂಖ್ಯಾತರ ಬಜೆಟ್' ಎಂದು ಬಿಜೆಪಿ ಜಿಲ್ಲಾ ಘಟಕದ ಮಾಧ್ಯಮ ವಕ್ತಾರ ನಾಗರಾಜ ನಾಯಕ ಟೀಕಿಸಿದರು.
ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಉತ್ತರ ಕನ್ನಡ ಜಿಲ್ಲೆಗೆ ಬಜೆಟ್ ನಲ್ಲಿ ಮಹತ್ತರವಾದ ಯೋಜನೆಗಳನ್ನು ಘೋಷಿಸಿಲ್ಲ. ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಎಂದೂ ಜಿಲ್ಲೆಯ ಕಾಳಜಿ ವಹಿಸಿಲ್ಲ' ಎಂದು ಆರೋಪಿಸಿದರು.
'ಅಹಿಂದ ಹೆಸರಿನಲ್ಲಿ ನಾಯಕರಾದ ಸಿದ್ದರಾಮಯ್ಯ ಅಲ್ಪಸಂಖ್ಯಾತರನ್ನು ಮಾತ್ರ ಓಲೈಸಿದ್ದು, ಹಿಂದುಳಿದ ವರ್ಗ, ದಲಿತರನ್ನು ಮರೆತಿದ್ದಾರೆ' ಎಂದು ದೂರಿದರು.
'ಐದು ಗ್ಯಾರಂಟಿ ಯೋಜನೆ ಜಾರಿಗೊಳಿಸುವ ಭರದಲ್ಲಿ ಬಹುಸಂಖ್ಯಾತ ವರ್ಗಕ್ಕೆ ತೆರಿಗೆ ಭಾರ ಹೇರುವ ಮೂಲಕ ಮುಖ್ಯಮಂತ್ರಿ ಕಲೆಕ್ಷನ್ ಬಜೆಟ್ ಮಂಡಿಸಿದ್ದಾರೆ' ಎಂದರು.
'ಕೃಷಿ ಕ್ಷೇತ್ರಕ್ಕೆ ಒತ್ತು ನೀಡುವ ಕೆಲಸ ಆಗಿಲ್ಲ. ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯಾಗಿಲ್ಲ ಎಂದು ಬಿಜೆಪಿ ಮೇಲೆ ಕಾಂಗ್ರೆಸ್ ಟೀಕಿಸಿತ್ತು. ಆದರೆ ಅವರದೇ ಸರ್ಕಾರ ಆಸ್ಪತ್ರೆ ಸ್ಥಾಪನೆಗೆ ಮುಂದಾಗದಿರುವುದು ದುರಂತ' ಎಂದರು.
'ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಗೋಹತ್ಯೆ ಪ್ರಕರಣ ಹೆಚ್ಚುತ್ತಿದೆ. ಗೋ ಕಳ್ಳತನ, ಗೋ ಹತ್ಯೆ ತಡೆಯಲು ಪೊಲೀಸ್ ಇಲಾಖೆಯೂ ವಿಫಲವಾಗಿದೆ' ಎಂದು ಆರೋಪಿಸಿದರು.
'ಜಿಲ್ಲೆಯ ಅಂಕೋಲಾ, ಕುಮಟಾ, ಭಟ್ಕಳ ಸೇರಿ ಕೆಲವೆಡೆ ಈಚೆಗೆ ಗೋ ಕಳ್ಳತನ ಪ್ರಕರಣ ಅಧಿಕವಾಗಿದೆ. ಗೋ ರಕ್ಷಕರ ಮೇಲೆ ಹಲ್ಲೆ ನಡೆಸುವ ಕೃತ್ಯವೂ ನಡೆಯುತ್ತಿದೆ' ಎಂದರು.
ಈ ವೇಳೆ ಮನೋಜ್ ಭಟ್, ರೇಷ್ಮಾ ಮಾಳ್ಸೇಕರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.