ಶಿರಸಿ: ಇತ್ತೀಚೆಗೆ ಬೆಂಗಳೂರಿನ ವಿಕಾಸ ಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ಜರುಗಿದ ‘ನಾಗರಿಕ ಯುವ ಸಂಸತ್ತು’ ಎಂಬ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಇಲ್ಲಿನ ಅರಣ್ಯ ಕಾಲೇಜಿನ ಐದು ವಿದ್ಯಾರ್ಥಿಗಳು ಆಯ್ಕೆಯಾಗಿ ಮಾದರಿ ಅಣಕು ಸಂಸತ್ತಿನಲ್ಲಿ ಭಾಗಿಯಾಗಿದ್ದರು.
ಸುಮಾರು 400 ವಿದ್ಯಾರ್ಥಿಗಳು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಂದ ಆಗಮಿಸಿ ಉತ್ಸಾಹದಿಂದ ಮಾದರಿ ಸಂಸತ್ತಿನಲ್ಲಿ ಪಾಲ್ಗೊಂಡರು. ವಿದ್ಯಾರ್ಥಿಗಳು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರಂತೆ ಮಾದರಿ ಸಂಸತ್ತಿನಲ್ಲಿ ಪಾಲ್ಗೊಂಡರು. ಸಭಾಧ್ಯಕ್ಷ ಹಾಗೂ ಪ್ರಧಾನಮಂತ್ರಿ ಸ್ಥಾನಕ್ಕೆ ಚುನಾವಣೆಗಳು ನಡೆದು ಮಾದರಿ ಸಂಸತ್ತಿನ ಸಂಸದರು ಸಚಿವರನ್ನು ಆಯ್ಕೆ ಮಾಡಿದರು.
ಶಿರಸಿ ಅರಣ್ಯ ಕಾಲೇಜಿನ ಐದು ವಿದ್ಯಾರ್ಥಿಗಳ ಪೈಕಿ ಇಬ್ಬರು ವಿದ್ಯಾರ್ಥಿಗಳಿಗೆ ಮಂತ್ರಿಗಳಾಗುವ ಅವಕಾಶ ದೊರೆಯಿತು. ಅರಣ್ಯ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿ ನಯನಾ ಇವರು ಅರಣ್ಯ ಮಂತ್ರಿ, ವಿದ್ಯಾರ್ಥಿನಿ ಸಂಜನಾ ಅವರು ಶಕ್ತಿ ಮತ್ತು ಇಂಧನ ಸಚಿವರಾಗಿ ಆಯ್ಕೆಯಾಗಿ ತಮ್ಮ ವಿಚಾರಗಳನ್ನು ಪ್ರಬುದ್ಧವಾಗಿ ಮಂಡಿಸಿದರು.
ವಿರೋಧ ಪಕ್ಷದ ಸಂಸದರಾಗಿ ಪ್ರಿಯದರ್ಶಿನಿ, ಚೇತನ್ ನಾಯ್ಕ ಮತ್ತು ವಿಜಿತ್ ಭಾಗವಹಿಸಿದ್ದರು. ಕೃಷಿ ಮತ್ತು ಅರಣ್ಯ ವಿಧೇಯಕಗಳ ಮತ್ತು ಮಸೂದೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಚರ್ಚೆಗಳಲ್ಲಿ ಭಾಗವಹಿಸುವ ಅವಕಾಶವು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆ ಪ್ರಕ್ರಿಯೆಗಳ ಬಗೆಗೆ ಸ್ವತಃ ಅನುಭವ ದೊರೆಯಿತು ಎಂದು ವಿದ್ಯಾರ್ಥಿಗಳು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.