ಶಿರಸಿ: ಉಪ ವಲಯ ಅರಣ್ಯಾಧಿಕಾರಿ (ಡಿ.ಆರ್.ಎಫ್.ಒ) ಹುದ್ದೆಗಳನ್ನು ಮುಂಬಡ್ತಿ ಹುದ್ದೆಯನ್ನಾಗಿ ಪರಿವರ್ತಿಸಲು ನೇಮಕಾತಿ ನಿಯಮಾವಳಿ ತಿದ್ದುಪಡಿಗೆ ಆಡಳಿತ ಸುಧಾರಣೆ ಆಯೋಗವು ಸಲ್ಲಿಸಿದ್ದ ಶಿಫಾರಸು ಇಲಾಖೆಯ ಅನುಮೋದನೆ ಹಂತದಲ್ಲಿದ್ದು, ಅರಣ್ಯ ಪದವೀಧರರನ್ನು ಕಂಗೆಡಿಸಿದೆ.
ಅರಣ್ಯ ಇಲಾಖೆ ಡಿಆರ್ಎಫ್ಒ ಹುದ್ದೆಗೆ ಸದ್ಯ ಇರುವ ಶೇ 50ರಷ್ಟು ಮುಂಬಡ್ತಿ ಮತ್ತು ಶೇ 50ರಷ್ಟು ನೇರ ನೇಮಕಾತಿ ರದ್ದುಪಡಿಸಿ ಶೇ 100ರಷ್ಟು ಹುದ್ದೆಗಳನ್ನು ಮುಂಬಡ್ತಿ ಹುದ್ದೆಯನ್ನಾಗಿ ಪರಿವರ್ತಿಸಲು ಈಚೆಗೆ ಸರ್ಕಾರದ ನಿಕಟಪೂರ್ವ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಸರ್ಕಾರಕ್ಕೆ ಶಿಫಾರಸು ವರದಿ ನೀಡಿದ್ದರು. ವರದಿ ಅರಣ್ಯ ಇಲಾಖೆಯ ಅನುಮೋದನೆ ಹಂತದಲ್ಲಿದ್ದು, ಅರಣ್ಯ ಪದವೀಧರರು ಹಾಗೂ ಪದವಿ ವಿದ್ಯಾರ್ಥಿಗಳ ತೀವ್ರ ವಿರೋಧ ವ್ಯಕ್ತವಾಗಿದೆ.
'ಒಬ್ಬ ಅರಣ್ಯ ಪದವೀಧರನನ್ನು ರೂಪಿಸಲು ₹6 ಲಕ್ಷ ವ್ಯಯವಾಗುತ್ತದೆ. ತಜ್ಞ ಅರಣ್ಯಾಧಿಕಾರಿ ಆಗಲು ಅರ್ಹರಿರುವಂತೆ ರೂಪಿಸಲಾಗುತ್ತದೆ. ಈಗಾಗಲೇ 1,500 ಅರಣ್ಯ ಪದವೀಧರರು ಡಿಆರ್ಎಫ್ಒ ಹುದ್ದೆ ಪಡೆಯಲು ಅರ್ಹರಿದ್ದರೂ ಅವಕಾಶಗಳಿಂದ ವಂಚಿತರಾಗಿದ್ದಾರೆ. ಆದರೆ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಇಲಾಖೆಗಳಲ್ಲಿ ಆಯಾ ವಿಷಯದ ಪದವೀಧರರನ್ನೆ ತಮ್ಮ ಇಲಾಖೆ ಹುದ್ದೆಗಳಿಗೆ ನೇಮಿಸಲಾಗುತ್ತದೆ’ ಎಂದು ಕರ್ನಾಟಕ ಅರಣ್ಯ ಪದವೀಧರರ ಮತ್ತು ವಿದ್ಯಾರ್ಥಿಗಳ ಸಂಘಟನೆಯ ಅಧ್ಯಕ್ಷ ಯಶಸ್ ಟಿ.ಎನ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ನೇಮಕಾತಿ ಮೀಸಲಾತಿ ಕಡಿತದಿಂದ ಅರಣ್ಯ ಪದವೀಧರರು ಈಗಾಗಲೇ ಬೇಸರದಲ್ಲಿದ್ದಾರೆ. ಡಿಆರ್ಎಫ್ಒ ಹುದ್ದೆಗಳಿಗೆ ಹಾಲಿ ಇರುವ ನೇರ ನೇಮಕಾತಿ ರದ್ದುಗೊಳಿಸಿದರೆ ಅನ್ಯಾಯವಾಗುತ್ತದೆ’ ಎಂದರು.
ರಾಜ್ಯದ ಉತ್ತರ ಕನ್ನಡದ ಶಿರಸಿ, ಕೊಡಗಿನ ಪೊನ್ನಂಪೇಟೆ ಮತ್ತು ಶಿವಮೊಗ್ಗದ ಇರುವಕ್ಕಿಯಲ್ಲಿ ಅರಣ್ಯ ಪದವಿ ಕಾಲೇಜುಗಳಿವೆ. ವರ್ಷಕ್ಕೆ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವೀಧರರು ಆಗುತ್ತಾರೆ.
ಅರಣ್ಯಾಧಿಕಾರಿ ಹುದ್ದೆ ನೇರ ನೇಮಕಾತಿಯಲ್ಲಿ ಅರಣ್ಯ ಪದವೀಧರರ ಶೇ 75ರ ಮೀಸಲಾತಿ ಕಡಿತಗೊಳಿಸಿ ಶೇ 50ಕ್ಕೆ ಇಳಿಸಲಾಗಿದೆ. ಆಂತರಿಕ ಮುಂಬಡ್ತಿಗೆ ಅವಕಾಶ ನೀಡುವ ಬದಲು ಅರಣ್ಯ ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಬೇಕು– ಆರ್.ವಾಸುದೇವ ಡೀನ್ ಶಿರಸಿ ಅರಣ್ಯ ಕಾಲೇಜು
ಶಿರಸಿಯ ಅರಣ್ಯ ಕಾಲೇಜು ವಿದ್ಯಾರ್ಥಿಗಳು ಶನಿವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದಾರೆ. ಟಿ.ಎಂ.ವಿಜಯಭಾಸ್ಕರ್ ವರದಿ ತಿರಸ್ಕರಿಸದಿದ್ದರೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತೇವೆ–ಯಶಸ್ ಟಿ.ಎನ್ ಅಧ್ಯಕ್ಷ ಕರ್ನಾಟಕ ಅರಣ್ಯ ಪದವೀಧರರ ಮತ್ತು ವಿದ್ಯಾರ್ಥಿಗಳ ಸಂಘಟನೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.