ಸಿದ್ದಾಪುರ: ಮೋದಿಯವರ ನೇತೃತ್ವದಲ್ಲಿ ಭಾರತ ಭವ್ಯತೆಯ ಕಡೆ ಸಾಗುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ನಾವು ತಪ್ಪು ಮಾಡಿದರೆ ಭಾತರ ಮತ್ತೆ ಭವ್ಯತೆಯನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಮತದಾರರು ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದರು.
ತಾಲ್ಲೂಕಿನ ಹೆಗ್ಗರಣಿಯ ಬಿಜೆಪಿ ಮಹಾಶಕ್ತಿ ಕೇಂದ್ರದ ಅಡಿಯಲ್ಲಿರುವ ತಂಡಾಗುಂಡಿಯಲ್ಲಿ ಶುಕ್ರವಾರ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೇ ದುಷ್ಕೃತ್ಯಗಳು ನಡೆಯುತ್ತವೆ. ದೇಶದ ಹೊರಗಿನ ಭಯೋತ್ಪಾದನೆ, ಒಳಗಿನ ದುಷ್ಟಕೃತ್ಯ, ಭೃಷ್ಟಾಚಾರ ತಡೆಯಲು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಗತ್ಯ ಎಂದರು.
ಇದು ಜಾತಿ ಗೆಲ್ಲಿಸುವ ಚುನಾವಣೆ ಅಲ್ಲ, ಭಾರತ ಗೆಲ್ಲಿಸುವ ಚುನಾವಣೆ. ಒಂದೊಂದು ಮತವೂ ಅಮೂಲ್ಯ. ಬಿಜೆಪಿ ಬೆಂಬಲಿತರಲ್ಲದೇ ಕಾಂಗ್ರೆಸಿಗರ ಮನೆಗೂ ಹೋಗಿ ಯಾಕೆ ಮೋದಿ ಪ್ರಧಾನಿಯಾಗಬೇಕು ಎನ್ನುವುದನ್ನು ಮನವರಿಕೆ ಮಾಡಿ ಎಂದು ಕಾರ್ಯಕರ್ತರಿಗೆ ಕರೆ ಕೊಟ್ಟರು.
ಜೆಡಿಎಸ್ ಜಿಲ್ಲಾ ಪ್ರಮುಖ ಉಪೇಂದ್ರ ಪೈ ಮಾತನಾಡಿದರು.
ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ.,ಪ್ರಮುಖರಾದ ಗುರುಪ್ರಸಾದ ಹೆಗಡೆ, ಮಾರುತಿ ನಾಯ್ಕ ಹೊಸೂರು, ಎಂ.ಜಿ.ಹೆಗಡೆ.ಮಹಾಬಲೇಶ್ವರ ಹೆಗಡೆ, ತೋಟಪ್ಪ ನಾಯ್ಕ ಇದ್ದರು.