ಜೊಯಿಡಾ (ಉತ್ತರ ಕನ್ನಡ): ತಾಲ್ಲೂಕಿನಲ್ಲಿ ಐದು ಜಾನುವಾರುಗಳನ್ನು ಬಲಿ ಪಡೆದು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದ ಹುಲಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕಳ್ನೆ ಎಂಬಲ್ಲಿ ದನದ ಕೊಟ್ಟಿಗೆಯಲ್ಲಿ ಇಡಲಾಗಿದ್ದ ಬೋನಿನಲ್ಲಿ ಭಾನುವಾರ ರಾತ್ರಿ ಸೆರೆಯಾಗಿದೆ.
ಏಳರಿಂದ ಒಂಬತ್ತು ವಯಸ್ಸಿನ ಹೆಣ್ಣು ಹುಲಿಯು, ವಾರದ ಅವಧಿಯಲ್ಲಿ ಉಳವಿ ಭಾಗದ ಕಾಳಸಾಯಿ ಸಮೀಪದ ಚಂದ್ರಾಳಿ ಹಾಗೂ ಹೆಣಕೊಳ ಸುತ್ತಮುತ್ತ ದಾಳಿ ಮಾಡಿತ್ತು.
‘ಸೆರೆ ಸಿಕ್ಕಿದ ಹುಲಿಗೆ ವಯಸ್ಸಾಗಿದ್ದು, ತುಸು ಅನಾರೋಗ್ಯದಿಂದ ಬಳಲುತ್ತಿದೆ. ಹಂಪಿಯಲ್ಲಿ ಚಿಕಿತ್ಸೆ ನೀಡಿ ಅಲ್ಲಿನ ಅಭಯಾರಣ್ಯಕ್ಕೆ ಬಿಡಲಾಗುವುದು’ ಎಂದು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ಮರಿಯಾ ಡಿ.ಕ್ರಿಸ್ತರಾಜು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಗಂಡು ಹುಲಿ ಸಾವು (ಚಾಮರಾಜನಗರ ವರದಿ): ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್ಟಿ) ಹುಲಿ ಸಂರಕ್ಷಿತ ಪ್ರದೇಶದ ಕೊಳ್ಳೇಗಾಲ ವಲಯ ಕಣ್ಣೂರು ಬೀಟ್ನಲ್ಲಿ ಕುರುಬನ ಕೆರೆ ಬಳಿ ಗಂಡು ಹುಲಿಯ ಕಳೇಬರ ಪತ್ತೆಯಾಗಿರುವುದು ತಡವಾಗಿ ಗೊತ್ತಾಗಿದೆ.
ಹುಲಿಗೆ 5ರಿಂದ 7ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ.
‘ಹುಲಿಯ ಉಗುರುಗಳು, ಹಲ್ಲುಗಳು ಎಲ್ಲವೂ ಇವೆ. ಮುಖಕ್ಕೂ ಗಾಯಗಳಾಗಿವೆ. ಒಂದು ಕಣ್ಣು ಹೊರಗಡೆ ಬಂದಿದೆ. ದೇಹದ ಅಂಗಾಂಗಳ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕಿ, ಡಿಸಿಎಫ್ ದೀಪ್ ಜೆ. ಕಾಂಟ್ರಾಕ್ಟರ್ ತಿಳಿಸಿದ್ದಾರೆ.