ಕಾರವಾರ: ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ‘ಪ್ರಾಜೆಕ್ಟ್ ಆಫೀಸರ್’ ಆಗಿದ್ದ ಶ್ರೀಕಾಂತ ತಮ್ಮಣ್ಣ ಮೇಲಿನಮನೆ (38) ಎಂಬುವವರು, ಇಲ್ಲಿನ ಕಾಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಹೊಸ ಕಾದ್ರೊಳ್ಳಿಯ ನಿವಾಸಿಯಾಗಿದ್ದ ಅವರು, ಸರ್ಕಾರೇತರ ಸಂಸ್ಥೆಯ ಮೂಲಕ ಐದಾರು ವರ್ಷಗಳಿಂದ ಜಿಲ್ಲಾ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಡಿ.2ರಂದು ಬೆಳಿಗ್ಗೆ ಕಾರವಾರದ ತಮ್ಮ ಮನೆಯಿಂದ ಹೊರಟಿದ್ದ ಅವರು, ಸ್ಕೂಟರ್ ಅನ್ನು ಕಾಳಿ ನದಿಯ ಸೇತುವೆಯ ಮೇಲೆ ನಿಲ್ಲಿಸಿ ನಾಪತ್ತೆಯಾಗಿದ್ದರು. ವಾರಸುದಾರರಿಲ್ಲದೇ ನಿಂತಿದ್ದ ವಾಹನದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದಾಗ ಅದು ಶ್ರೀಕಾಂತ ಅವರಿಗ ಸೇರಿದ್ದಾಗಿ ತಿಳಿದುಬಂದಿತ್ತು. ಅವರು ನಾಪತ್ತೆಯಾಗಿದ್ದ ಬಗ್ಗೆ ಸಂಶಯಗಳೂ ಮೂಡಿದ್ದವು. ಶನಿವಾರ ಅವರ ಮೃತದೇಹವು ಸುಂಕೇರಿಯ ಜಗತಕಟ್ಟಾ ಬಳಿ ಕಾಳಿ ನದಿಯ ದಂಡೆಯಲ್ಲಿ ಪತ್ತೆಯಾಗಿದೆ.
ಅವರ ತಂದೆ ತಮ್ಮಣ್ಣ ಮೇಲಿನಮನೆ ಕಾರವಾರ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ‘ಕೆಲಸದ ಸಮಯದಲ್ಲಿ ಮೇಲಧಿಕಾರಿಗಳ ಒತ್ತಡ ಹಾಗೂ ಕಿರುಕುಳಕ್ಕೆ ಬೇಸತ್ತು ಹಾಗೂ ಜೀವನದಲ್ಲಿ ಜುಗುಪ್ಸೆಗೊಂಡಿದ್ದು, ಕಾಳಿ ನದಿಯ ಸೇತುವೆ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದ್ದಾರೆ.