ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನಲ್ಲಿ 7, ಕುರುಗೋಡು ತಾಲ್ಲೂಕಿನ 6, ಕಂಪ್ಲಿ ತಾಲ್ಲೂಕಿನ 3 ಮನೆಗಳಿಗೆ ಹಾನಿ ಉಂಟಾಗಿದೆ. ಎರಡೂ ಜಿಲ್ಲೆಗಳಲ್ಲಿ ಮಂಗಳವಾರ ನಸುಕಿನ ಜಾವ ಐದು ಗಂಟೆಯಿಂದ ಬೆಳಿಗ್ಗೆ 9ಗಂಟೆಯ ವರೆಗೆ ಸುರಿದ ಸತತ ಮಳೆಗೆ ಚೆಕ್ ಡ್ಯಾಂ, ಹಳ್ಳ, ಕೆರೆ, ಕಟ್ಟೆಗಳು ತುಂಬಿ ಹರಿದಿವೆ. ಸಂಡೂರಿನ ನಾರಿಹಳ್ಳ ಜಲಾಶಯದಿಂದ ನೀರು ಹರಿಸಿದ್ದರಿಂದ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಎರಡೂ ಜಿಲ್ಲೆಯಲ್ಲಿ ಹತ್ತಿ, ಮೆಣಸಿನಕಾಯಿ, ಬಾಳೆ, ಮೆಕ್ಕೆಜೋಳ ಹಾಳಾಗಿದ್ದು, ಸಮೀಕ್ಷೆ ನಂತರ ಎಷ್ಟು ಪ್ರಮಾಣದ ಬೆಳೆ ಹಾನಿಯಾಗಿದೆ ಎನ್ನುವುದು ಗೊತ್ತಾಗಲಿದೆ. ವಿಜಯನಗರ ಜಿಲ್ಲೆಯಲ್ಲಿ ಶಾಲೆ ರಜೆ ಘೋಷಿಸಲಾಗಿತ್ತು.