ಕೂಡ್ಲಿಗಿ: ತಾಲ್ಲೂಕಿನಲ್ಲಿ 57,813 ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದು, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಗುರಿ ಶೇ. 98 ಮುಟ್ಟಿದ್ದರೂ, ಸಕಾಲಕ್ಕೆ ಮಳೆ ಬಾರದೇ ಶೇ. 96ರಷ್ಟು ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಶೇಂಗಾ 24,934 ಹೆಕ್ಟೇರ್, ಮೆಕ್ಕೆಜೋಳ 17,938 ಹೆಕ್ಟೇರ್, ರಾಗಿ 3,646 ಹೆಕ್ಟೇರ್, ಸಜ್ಜೆ 2,410 ಹೆಕ್ಟೇರ್, ನವಣೆ 881 ಹೆಕ್ಟೇರ್, ತೊಗರಿ 931 ಹೆಕ್ಟೇರ್, ಸೂರ್ಯಕಾತಿ 1,328 ಹೆಕ್ಟೇರ್, ಹತ್ತಿ 1,554 ಹೆಕ್ಟೇರ್ ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು 55,269 ಹೆಕ್ಟೇರ್ ಮುಂಗಾರು ಬೆಳೆ ಹಾನಿಯಾಗಿದೆ.
ತಾಲ್ಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗೂ 484 ಮಿ.ಮೀ ಮಳೆಯಾಗಬೇಕಾಗಿತ್ತು. ಆದರೆ, 269 ಮಿ.ಮೀ ಮಾತ್ರ ಮಳೆಯಾಗಿದೆ.
ಈ ಬಾರಿ ತೀವ್ರ ಮಳೆ ಕೊರತೆಯಿಂದ ಬಹುತೇಕ ಕೆರೆಗಳಲ್ಲಿ ನೀರಿಲ್ಲ. ಮುಂದಿನ ದಿನಗಳಲ್ಲಿ ಅಂತರ್ಜಲ ಕುಸಿದು ಕುಡಿಯುವ ನೀರಿಗೂ ಸಂಕಷ್ಟ ಎದುರಾಗಬಹುದು. ಅಲ್ಲದೆ, ಮೇವಿಗೂ ಕೊರತೆಯಾಗಬಹುದು. ತಾಲ್ಲೂಕಿನಲ್ಲಿ ಆದಷ್ಟು ಬೇಗ ಗೋಶಾಲೆ ಆರಂಭ ಮಾಡಬೇಕು ಎಂಬುದು ರೈತರ ಒತ್ತಾಸೆಯಾಗಿದೆ.
‘ಮಳೆ ಇಲ್ಲದೆ ಬೆಳೆ ಒಣಗಿ ಹೋಗಿವೆ. ಸರ್ಕಾರವು ರೈತರಿಗೆ ಹೆಚ್ಚಿನ ಮಟ್ಟದಲ್ಲಿ ಉದ್ಯೋಗ ಖಾತ್ರಿ ಕೆಲಸ ಹಾಗೂ ಬೆಳೆ ಪರಿಹಾರ ನೀಡುವ ಮೂಲಕ ನೆರವಿಗೆ ಬರಬೇಕು ಎಂದು ನಿಂಬಳಗೆರೆ ರೈತ ಜಿ.ವಿನಾಯಕ ಆಗ್ರಹಿಸಿದ್ದಾರೆ.
ತಾಲ್ಲೂಕಿನಲ್ಲಿ ಬೆಳೆ ಸಮೀಕ್ಷೆ ಬಹುತೇಕ ಮುಗಿದಿದ್ದು, ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಕೇಂದ್ರ ಬರ ಅಧ್ಯಯನ ತಂಡ ತಾಲ್ಲೂಕಿಗೆ ಶನಿವಾರ ಭೇಟಿ ನೀಡಲಿದ್ದು, ರೈತರು ಬರ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.
6KDL2: ಮುಂಗಾರು ಹಂಗಾಮಿನಲ್ಲಿ ಸಮರ್ಪಕವಾಗಿ ಮಳೆ ಇಲ್ಲದೆ ಕೂಡ್ಲಿಗಿ ತಾಲ್ಲೂಕಿನ ಹೊಲವೊಂದರಲ್ಲಿ ಬೆಳೆದು ನಿಂತಿದ್ದ ಮೆಕ್ಕೆ ಜೋಳ ಒಣಗಿರುವುದು.