ಹೊಸಪೇಟೆ (ವಿಜಯನಗರ): ನಗರದ 35ನೇ ವಾರ್ಡಿನ ಮೂರನೇ ಅಂಗನಾವಾಡಿ ಕೇಂದ್ರದ ಪರಿಸರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ತ್ಯಾಜ್ಯದ ರಾಶಿಯನ್ನು ನಗರಸಭೆ ಪೌರಕಾರ್ಮಿಕರು ಬುಧವಾರ ತೆರವುಗೊಳಿಸಿದ್ದಾರೆ.
'ತಿಪ್ಪೆಯ ನಡುವೆ ಅಂಗನವಾಡಿ' ಶೀರ್ಷಿಕೆ ಅಡಿ ಬುಧವಾರ ‘ಪ್ರಜಾವಾಣಿ‘ ವರದಿ ಪ್ರಕಟಿಸಿತ್ತು. ಅದರ ಬೆನ್ನಲ್ಲೇ ನಗರಸಭೆ ಪರಿಸರ ಎಂಜಿನಿಯರ್ ಜಿ. ಆರತಿ ಸೂಚನೆ ಮೇರೆಗೆ ಪೌರಕಾರ್ಮಿಕರು ಜೆಸಿಬಿಯೊಂದಿಗೆ ತೆರಳಿ ಟ್ರ್ಯಾಕ್ಟರ್ನಲ್ಲಿ ಕಸದ ರಾಶಿ ಬೇರೆಡೆ ಸಾಗಿಸಿದರು.
‘ಅಂಗನವಾಡಿ ಕೇಂದ್ರದ ಆವರಣದಲ್ಲಿದ್ದ ಕಸವನ್ನು ತೆರವುಗೊಳಿಸಲಾಗಿದೆ. ಸಾರ್ವಜನಿಕರು ಇನ್ಮುಂದೆ ಈ ಭಾಗದಲ್ಲಿ ಕಸ ಚೆಲ್ಲದಂತೆ ಸೂಚಿಸಲಾಗುತ್ತದೆ’ ಎಂದು ಆರತಿ ತಿಳಿಸಿದರು.