ಹೊಸಪೇಟೆ (ವಿಜಯನಗರ): ನಿವೇಶನ, ಮನೆಗೆ ಸಂಬಂಧಿಸಿದಂತೆ ನಗರಸಭೆ ಸಕಾಲಕ್ಕೆ ದಾಖಲೆ ಕೊಡಬೇಕೆಂದು ವಿಜಯನಗರ ನಾಗರಿಕ ವೇದಿಕೆ, ವಿನಾಯಕ ನಗರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಹಿಂದುಳಿದ ವರ್ಗಗಳ ಒಕ್ಕೂಟ ಆಗ್ರಹಿಸಿದೆ.
ಈ ಸಂಬಂಧ ಸಂಘಟನೆಗಳ ಮುಖಂಡರು ಮಂಗಳವಾರ ನಗರದಲ್ಲಿ ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.
ನಗರಸಭೆ ಯಾರೊಂದಿಗೂ ಚರ್ಚಿಸದೇ ಏಕಾಏಕಿ ಆಸ್ತಿ ತೆರಿಗೆಯನ್ನು ಹೆಚ್ಚಿಸಿದೆ. ಆದರೆ, ನಾಗರಿಕರ ಮ್ಯುಟೇಶನ್, ಫಾರಂ ನಂಬರ್ 3 ಸಕಾಲಕ್ಕೆ ಕೊಡುತ್ತಿಲ್ಲ. ನಿವೇಶನ ಖರೀದಿ, ಮಾರಾಟ, ಮನೆ ನಿರ್ಮಾಣಕ್ಕೆ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ನಗರಸಭೆ ವಿರುದ್ಧ ಸಾರ್ವಜನಿಕರು ತೀವ್ರ ಬೇಸರಗೊಂಡಿದ್ದಾರೆ ಎಂದು ತಿಳಿಸಿದರು.
2000ನೇ ಇಸ್ವಿಯಲ್ಲಿ ಕೃಷಿ ಜಮೀನಿಗೆ ಸಂಬಂಧಿಸಿದ ಪಹಣಿ ಸೇರಿದಂತೆ ಇತರೆ ದಾಖಲೆಗಳನ್ನು ಪಡೆಯಲು ಉತ್ತಮ ವ್ಯವಸ್ಥೆ ಜಾರಿಗೆ ತರಲಾಗಿದೆ. ಅದೇ ಮಾದರಿಯ ವ್ಯವಸ್ಥೆ ನಗರಸಭೆಯಲ್ಲೂ ಜಾರಿಗೆ ತರಬೇಕು ಎಂದು ಹಕ್ಕೊತ್ತಾಯ ಮಾಡಿದರು.