ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಕನ್ನಡ ವಿ.ವಿ. ಅರ್ಜಿವಜಾಗೊಳಿಸಿದ ಹೈಕೋರ್ಟ್‌

ಕುವೆಂಪು ಸಮಗ್ರ ಸಾಹಿತ್ಯದ 12ನೇ ಸಂಪುಟದ ಕೃತಿಚೌರ್ಯ ಪ್ರಕರಣ
Last Updated 14 ಮಾರ್ಚ್ 2023, 5:23 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ಕುವೆಂಪು ಸಮಗ್ರ ಸಾಹಿತ್ಯದ 12ನೇ ಸಂಪುಟದ ಮಾರಾಟಕ್ಕೆ ಸಂಬಂಧಿಸಿದಂತೆ ಕನ್ನಡ ವಿ.ವಿ. ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ಸೋಮವಾರ ವಜಾಗೊಳಿಸಿ ಆದೇಶ ಹೊರಡಿಸಿದೆ.

ಕೆಳಹಂತದ ನ್ಯಾಯಾಲಯದಲ್ಲಿ (ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷೆನ್ಸ್‌ ನ್ಯಾಯಾಲಯ) ಪ್ರಕರಣದ ವಿಚಾರಣೆ ನಡೆಸಿ, ಆರು ತಿಂಗಳೊಳಗೆ ವಿಲೇವಾರಿಗೊಳಿಸಬೇಕು. ಅಲ್ಲಿಯವರೆಗೆ 12ನೇ ಸಂಪುಟ ಮಾರಾಟ ಮಾಡುವಂತಿಲ್ಲ ಎಂದು ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣಕುಮಾರ್‌ ಆದೇಶ ಹೊರಡಿಸಿದ್ದಾರೆ.

‘ಕೆಳಹಂತದ ನ್ಯಾಯಾಲಯದಲ್ಲಿ ಪ್ರಕರಣದ ಅಂತಿಮ ತೀರ್ಪು ಬರುವವರೆಗೆ 12ನೇ ಸಂಪುಟವನ್ನು ಶೈಕ್ಷಣಿಕ ಮತ್ತು ಸಂಶೋಧನಾ ಕೆಲಸಕ್ಕೆ ಹೊರತುಪಡಿಸಿದರೆ ಅನ್ಯ ಉದ್ದೇಶಕ್ಕೆ ಬಳಸುವುದಿಲ್ಲ. ಅದನ್ನು ಮಾರಾಟ ಕೂಡ ಮಾಡುವುದಿಲ್ಲ ಎಂದು ಕನ್ನಡ ವಿಶ್ವವಿದ್ಯಾಲಯವು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಕೂಡ ಸಲ್ಲಿಸಿದೆ’ ಎಂದು ಪುಸ್ತಕದ ಲೇಖಕ ಪುಸ್ತಕಮನೆ ಹರಿಹರಪ್ರಿಯ ಪರ ವಕೀಲ ಎಚ್‌.ಎಸ್. ವಿವೇಕಾನಂದ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಏನಿದು ಪ್ರಕರಣ?:

1974ರಲ್ಲಿ ಬರೆದ ‘ಕುವೆಂಪು ಪತ್ರಗಳು’ ಪುಸ್ತಕದಿಂದ ಕುವೆಂಪು ಅವರ 62 ಪತ್ರಗಳನ್ನು ಯಥಾವತ್ತಾಗಿ ತೆಗೆದುಕೊಂಡು ಹಂಪಿ ಕನ್ನಡ ವಿಶ್ವವಿದ್ಯಾಲಯವು ಕುವೆಂಪು ಸಮಗ್ರ ಸಾಹಿತ್ಯದ ಹನ್ನೆರಡನೇ ಸಂಪುಟದಲ್ಲಿ ಪ್ರಕಟಿಸಿ ಕೃತಿಚೌರ್ಯ ಮಾಡಿದೆ ಎಂದು ಆರೋಪಿಸಿ ಪುಸ್ತಕದ ಲೇಖಕ ಪುಸ್ತಕಮನೆ ಹರಿಹರಪ್ರಿಯ ಅವರು ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷೆನ್ಸ್‌ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಪುಸ್ತಕ ಮಾರಾಟಕ್ಕೆ ತಡೆಯಾಜ್ಞೆ ನೀಡಿತ್ತು. ಇದರ ವಿರುದ್ಧ ಕನ್ನಡ ವಿಶ್ವವಿದ್ಯಾಲಯವು ಹೈಕೋರ್ಟ್‌ ಮೊರೆ ಹೋಗಿ ಅದಕ್ಕೆ ತಡೆ ತಂದಿತ್ತು. ಈಗ ಆ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಕೃತಿಚೌರ್ಯಕ್ಕೆ ಸಂಬಂಧಿಸಿ ಹಂಪಿ ಕನ್ನಡ ವಿ.ವಿ. ಅಂದಿನ ಕುಲಪತಿ ಪ್ರೊ. ಸ.ಚಿ. ರಮೇಶ, ಕುಲಸಚಿವ ಪ್ರೊ.ಎ. ಸುಬ್ಬಣ್ಣ ರೈ, ಪ್ರಸಾರಾಂಗದ ನಿರ್ದೇಶಕ ಎಚ್‌.ಡಿ. ಪ್ರಶಾಂತ್‌, ಕುವೆಂಪು ಸಮಗ್ರ ಸಾಹಿತ್ಯದ ಸಂಪಾದಕ ಕೆ.ಸಿ. ಶಿವಾರೆಡ್ಡಿ, ಸಲಹಾ ಸಮಿತಿ ಸದಸ್ಯ ವೀರೇಶ್‌ ಬಡಿಗೇರ್‌ ಅವರು ನ್ಯಾಯಾಲಯದಲ್ಲಿ ಪ್ರತಿವಾದಿಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT