ಹೊಸಪೇಟೆ(ವಿಜಯನಗರ): ನಗರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಗುರುವಾರ ಕೋವಿಡ್–19 ಕುರಿತು ಜಾಗೃತಿ ಮೂಡಿಸಲಾಯಿತು.
ಸಾರಿಗೆ ಅಧಿಕಾರಿ ವಸಂತ ಚವ್ಹಾಣ್ ಅವರು ಕಚೇರಿಯ ಆವರಣದಲ್ಲಿ ಓಡಾಡಿ, ಅಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ವ್ಯವಹರಿಸಬೇಕು ಎಂದು ಸೂಚಿಸಿದರು. ಮಾಸ್ಕ್ ಇಲ್ಲದೆ ಓಡಾಡುತ್ತಿದ್ದ ಯುವಕನನ್ನು ತಡೆದು ₹100 ದಂಡ ವಿಧಿಸಿ, ಮಾಸ್ಕ್ ವಿತರಿಸಿದರು.
‘ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಲು ಕಚೇರಿಯ ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಕಚೇರಿ ಹೊರಗಡೆ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ಸಹ ಮಾಡಲಾಗುತ್ತಿದೆ. ಕಚೇರಿ ವೆಬ್ ಸೈಟ್ ಮೂಲಕ ಆನ್ ಲೈನ್ ಆರ್ಜಿ ಹಾಗೂ ಆನ್ ಲೈನ್ ಪಾವತಿಗೂ ಅವಕಾಶವಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.
‘ಈಗಾಗಲೇ ಆನ್ ಲೈನ್ ಸ್ಲಾಟ್ (ಚಾಲನಾ ಪರೀಕ್ಷೆ ಸಮಯ ನಿಗದಿ) ಸಹ ಶೇ. 50ರಷ್ಟು ಕಡಿಮೆ ಮಾಡಲಾಗಿದೆ. ಮುಂದಿನ ಮಾರ್ಗಸೂಚಿಗಳಲ್ಲಿ ಮತ್ತಷ್ಟು ಕಡಿಮೆ ಮಾಡುವ ಸಾಧ್ಯತೆ ಇದೆ’ ಎಂದು ತಿಳಿಸಿದರು.