ಹರಪನಹಳ್ಳಿ: ತಾಲ್ಲೂಕಿನ ಕೊಂಗನಹೊಸೂರು ಗ್ರಾಮದಲ್ಲಿ ಕಾಡುಹಂದಿ ಸಾಯಿಸಲು ಅರಣ್ಯದಂಚಿನ ಜಮೀನಿನಲ್ಲಿ ಎಸೆದಿದ್ದ ಮದ್ದು ಮಿಶ್ರಿತ ಮಾವಿನ(ವಾಟೆ) ಗೊಟ್ಟ ತಿಂದು ಹಸು ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ ಜರುಗಿದೆ.
ಗ್ರಾಮದ ಚನ್ನಬಸಪ್ಪ ಅವರಿಗೆ ಸೇರಿದ ಹಸುವಿನ ಬಾಯಿಯಲ್ಲಿ ಮಾವಿನಗೋಟೆ ಸ್ಪೋಟಗೊಂಡು ತೀವ್ರಸ್ವರೂಪದ ಗಾಯವಾಗಿದೆ.
‘ಹಸು ನಿತ್ಯ ಆರು ಲೀಟರ್ ಹಾಲು ಕೊಡುತ್ತಿತ್ತು. ಅದರಿಂದ ಬರುತ್ತಿದ್ದ ಆದಾಯ ಮನೆ ನಿರ್ವಹಣೆಗೆ ನೆರವಾಗಿತ್ತು. ಈಗ ಹಸು ಸಾವು ಬದುಕಿನ ಮಧ್ಯೆ ಹೋರಾಡುತ್ತಿದೆ. ಏನು ಮಾಡುವುದು ತಿಳಿಯುತ್ತಿಲ್ಲ’ ಎಂದು ರೈತ ಚನ್ನಬಸಪ್ಪ ಅಳಲು ತೋಡಿಕೊಂಡರು.
‘ಅರಣ್ಯದಂಚಿನಲ್ಲಿ ರಾತ್ರಿ ಬೇಟೆಯಾಡುವುದು, ಮರ ಕಡಿಯುವುದನ್ನು ತಡೆಯಲು ಪ್ರತಿದಿನ ‘ಕಾಲಭೈರವ’ ತಂಡ ಗಸ್ತು ತಿರುಗುತ್ತದೆ. ಮಾವಿನ ಗೊಟ್ಟ(ವಾಟೆ)ದಲ್ಲಿ ಮದ್ದು ಇಟ್ಟಿರುವ ಬಗ್ಗೆ ರೈತರು ದೂರಿದ್ದಾರೆ. ತನಿಖೆ ಕೈಗೊಳ್ಳಲಾಗುವುದು’ ಎಂದು ವಲಯ ಅರಣ್ಯ ಅಧಿಕಾರಿ ಮಲ್ಲಪ್ಪ ತಿಳಿಸಿದರು.
‘ಹಸುವಿನ ಬಾಯಿ ಪೂರ್ಣ ಪ್ರಮಾಣದಲ್ಲಿ ಒಡೆದಿದ್ದರೆ ಹೊಲಿಗೆ ಹಾಕುವುದು ತುಂಬಾ ಕಷ್ಟ. ತಕ್ಷಣವೇ ಸಮೀಪದ ವೈದ್ಯರನ್ನು ಕಳಿಸಿ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಶಿವಕುಮಾರ ಜ್ಯೋತಿ ತಿಳಿಸಿದರು.