ಮರಿಯಮ್ಮನಹಳ್ಳಿ (ಹೊಸಪೇಟೆ): ಸಮೀಪದ ರಾಷ್ಟ್ರೀಯ ಹೆದ್ದಾರಿ-50ರ ಬಳಿಯ ಗುಂಡಾ ಸಸ್ಯೋದ್ಯಾನದ (ಗುಂಡಾ ಫಾರೆಸ್ಟ್) ಪಾರ್ಕಿಂಗ್ ಬಳಿ ಬುಧವಾರ ಬೆಳಗಿನ ಜಾವ ಕಳ್ಳರ ಗುಂಪೊಂದು ಕಾರು ಪಾರ್ಕಿಂಗ್ ಮಾಡಿ ಮಲಗಿದ್ದವರ ಬಳಿಯಿದ್ದ ನಗದು, ಚಿನ್ನದ ಆಭರಣ ಹಾಗೂ ಮೊಬೈಲುಗಳು ಸೇರಿದಂತೆ ಒಟ್ಟು ₹ 3 ಲಕ್ಷಕ್ಕೂ ಅಧಿಕ ಮೌಲ್ಯದ ಸಾಮಗ್ರಿಗಳನ್ನು ದೋಚಿದ್ದಾರೆ.
ತುಮಕೂರಿನ ಮಹಮ್ಮದ್ ಸಾಧಿಕ್ ಪಾಷಾ(38) ಅವರು ಕುಟುಂಬ ಸಮೇತ ರಾತ್ರಿ ಕಾರಿನಲ್ಲಿ ಗಂಗಾವತಿಗೆ ಮದುವೆಗೆ ಹೊರಟಿದ್ದರು. ಈ ಸಂದರ್ಭದಲ್ಲಿ ಬೆಳಗಿನ ಜಾವ ವಿಶ್ರಾಂತಿ ಪಡೆಯಲು ಗುಂಡಾ ಸಸ್ಯೋದ್ಯಾನ ಬಳಿ ಕೆಲಹೊತ್ತು ಕಾರು ನಿಲ್ಲಿಸಿ ನಾಲ್ವರು ಕೆಳಗಡೆ ಮಲಗಿದ್ದು, ಉಳಿದವರು ಕಾರಿನಲ್ಲಿ ಮಲಗಿದ್ದರು.
ಈ ಸಮಯದಲ್ಲಿ ಕಳ್ಳರು ಮಲಗಿದ್ದವರ ಬಳಿ ಇದ್ದ ನಗದು ₹ 6 ಸಾವಿರ ಸೇರಿದಂತೆ ಪರ್ಸ್ ನಲ್ಲಿದ್ದ ₹ 2.80ಲಕ್ಷ ಮೌಲ್ಯದ 80ಗ್ರಾಂ ಚಿನ್ನದ ಆಭರಣ ಹಾಗೂ ₹15ಸಾವಿರ ಮೌಲ್ಯದ 3 ಮೊಬೈಲುಗಳನ್ನು ದೋಚಿಕೊಂಡು ಹೋಗಿದ್ದಾರೆ.
ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.