ಮರಿಯಮ್ಮನಹಳ್ಳಿ (ಹೊಸಪೇಟೆ): ಸಮೀಪದ ಗೊಲ್ಲರಹಳ್ಳಿ ಗ್ರಾಮದ ಬಳಿಯ ಹೊಲವೊಂದರಲ್ಲಿ ಬುಧವಾರ ರಾತ್ರಿ ಬೀಡು ಬಿಟ್ಟಿದ್ದ ಕುರಿಹಿಂಡಿನ ಜೊತೆಗಿದ್ದ ಕುರಿಗಾಹಿ ಕುಮಾರಸ್ವಾಮಿ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ.
ಸಂಜೆ ಕುರಿಗಳನ್ನು ಮೇಯಿಸಿಕೊಂಡು ಗ್ರಾಮದ ಹೊರವಲಯದ ಹೊಲವೊಂದರಲ್ಲಿ ಕುಮಾರಸ್ವಾಮಿ ಬೀಡುಬಿಟ್ಟಿದ್ದರು. ರಾತ್ರಿ ಕುರಿ ಹಿಡಿಯಲು ಬಂದ ಚಿರತೆ ಕುರಿಗಾಹಿ ಕುಮಾರಸ್ವಾಮಿ ಮೇಲೆ ದಾಳಿ ಮಾಡಿದ್ದರಿಂದ ಅವರ ಕೈಕಾಲುಗಳಿಗೆ ಗಾಯಗಳಾಗಿವೆ. ಬಳಿಕ ಕುಮಾರುಸ್ವಾಮಿ ಹಾಗೂ ಮತ್ತೊಬ್ಬ ಕುರಿಗಾಹಿ ಮಹೇಶ್ ಕೋಲುಗಳಿಂದ ಚಿರತೆಯನ್ನು ಹೆದರಿಸಿ ಓಡಿಸಿದ್ದಾರೆ.
‘ಗ್ರಾಮದ ಸುತ್ತಮುತ್ತ ಮೂರ್ನಾಲ್ಕು ಚಿರತೆಗಳು ಓಡಾಡುತ್ತಿವೆ. ರಾತ್ರಿ ಸಮಯದಲ್ಲಿ ಗ್ರಾಮಕ್ಕೆ ನುಗ್ಗಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿವೆ. ಅರಣ್ಯ ಇಲಾಖೆಯವರು ಬೋನು ಇರಿಸಿ, ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.