ಹೊಸಪೇಟೆ (ವಿಜಯನಗರ): ಕಾಶ್ಮೀರದ 370ನೇ ವಿಧಿ ರದ್ದುಪಡಿಸಿದ್ದು, ಜಟಿಲವಾಗಿದ್ದ ರಾಮಮಂದಿರ ವಿವಾದ ಬಗೆಹರಿಸಿದ್ದು ಸಹಿತ ಕೇವಲ ಒಂಬತ್ತು ವರ್ಷಗಳಲ್ಲಿ. 50 ವರ್ಷ ಆಗಿರದ ಸಾಧನೆ ಮಾಡಿದ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುವುದು ನಿಶ್ಚಿತ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿನ ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಆವರಣದಲ್ಲಿ ಶನಿವಾರ ನಡೆದ ‘ನನ್ನ ದೇಶ ನನ್ನ ಮಣ್ಣು’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಾಜಪೇಯಿ ಅವಧಿಯಲ್ಲಿ ಸಹ ದೇಶ ಬಹಳಷ್ಟು ಸಾಧನೆ ಮಾಡಿತು. ಮೋದಿ ಅವಧಿಯಲ್ಲಿ ಭಾರತ ಇದೀಗ ಬ್ರಿಟನ್ ಅನ್ನೂ ಹಿಂದಿಕ್ಕಿ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಜನರಿಗೆ ಇದೆಲ್ಲವೂ ಗೊತ್ತಿರುವುದರಿಂದ ಕಾಂಗ್ರೆಸ್ ಪಕ್ಷದ ಅಥವಾ ‘ಇಂಡಿಯಾ’ ಮೈತ್ರಿಕೂಟದ ಯಾವ ತಂತ್ರವೂ ಫಲಿಸದು ಎಂದರು.
ಯುರೋಪ್, ಅಮೆರಿಕಕ್ಕೆ ಹೋಗಿ ಭಾರತವನ್ನು ದೂಷಿಸುವ ರಾಹುಲ್ ಗಾಂಧಿ ಅವರಿಗೆ ದೇಶದ ಬಗ್ಗೆ ಕಾಳಜಿ ಇಲ್ಲ. ಸದ್ಯದ ಸ್ಥಿತಿಯಲ್ಲಿ ನರೇಂದ್ರ ಮೋದಿ ಅವರಿಗೆ ದೇಶದಲ್ಲಿ ಪರ್ಯಾಯ ನಾಯಕರಿಲ್ಲ ಎಂದರು.
ದೇಶದಲ್ಲಿನ ಹಲವು ಗುಲಾಮಿ ವ್ಯವಸ್ಥೆಯನ್ನು ತೊಡದು ಹಾಕಿದ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ರಾಜಪರಂಪರೆಯನ್ನು ಧಿಕ್ಕರಿಸಿ, ಕರ್ತವ್ಯ ಮಾಡಲು ನಾವು ಇಲ್ಲಿ ಇರುವುದು ಎಂಬ ಸಂದೇಶವನ್ನು ನೀಡಲಾಗಿದೆ ಎಂದರು.
ಇತಿಹಾಸದ ಅವಲೋಕ ಮಾಡಿದ ಅವರು, ನೇತಾಜಿ ಸುಭಾಶ್ಚಂದ್ರ ಬೋಸ್ ಅವರೇ ದೇಶದ ಮೊದಲ ಪ್ರಧಾನಿ. ಅವರಿಂದಾಗಿಯೇ ಬ್ರಿಟಿಷರು ಭಯಗೊಂಡು ದೇಶಕ್ಕೆ ಸ್ವಾತಂತ್ರ್ಯ ನೀಡಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ 370ನೇ ವಿಧಿ ಸೇರಿಸುವುದಕ್ಕೆ ಬಲವಾಗಿ ವಿರೋಧಿಸಿದ್ದರು. ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಡಿಸಿದ್ದು ಸಹ ಬಿಜೆಪಿ ನಾಯಕರು. ಸಂಸತ್ ಭವನದಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕಿಸಿದ್ದು ಸಹ ಬಿಜೆಪಿ ಎಂದರು.
ಕೊಟ್ಟೂರುಸ್ವಾಮಿ ಮಹಾಸಂಸ್ಥಾನದ ಬಸವಲಿಂಗ ಸ್ವಾಮೀಜಿ, ಸಂಸದ ವೈ. ದೇವೇಂದ್ರಪ್ಪ, ಬಿಜೆಪಿ ನಾಯಕರಾದ ಬಸವನಗೌಡ ಪಾಟೀಲ್, ಸಿದ್ಧಾರ್ಥ ಸಿಂಗ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.