ಹೊಸಪೇಟೆ (ವಿಜಯನಗರ): ಇಲ್ಲಿಗೆ ಸಮೀಪದ ಜಂಬುನಾಥ ಗುಡ್ಡದ ಜಂಬುನಾಥೇಶ್ವರ ರಥೋತ್ಸವ ಭಾನುವಾರ ಸಂಜೆ ಭಕ್ತಿ ಭಾವದೊಂದಿಗೆ ನಡೆದರೂ, ರಥದ ಚಕ್ರದಡಿಗೆ ವ್ಯಕ್ತಿಯೊಬ್ಬರು ಸಿಲುಕಿ ಮೃತಪಟ್ಟ ಕಾರಣ ವೃದ್ಧೆಯೊಬ್ಬರು ಇನ್ನು ನಿತ್ಯ ಕಣ್ಣೀರಲ್ಲೇ ಕೈತೊಳೆಯಬೇಕಾದ ಸ್ಥಿತಿ ಎದುರಾಗಿದೆ.
ರಥ ಕಟ್ಟುವ ಕೆಲಸ ಮಾಡುತ್ತಿದ್ದ ಸಿ.ಕೆ.ರಾಮು (45) ಮೃತರು. ಅವಿವಾಹಿತರಾಗಿದ್ದ ಅವರು, ವೃದ್ಧ ತಾಯಿಗೆ ಆಸರೆಯಾಗಿದ್ದರು. ಅವರ ಸಾವಿನೊಂದಿಗೆ ತಾಯಿ ಇದೀಗ ಜೀವನಾಧಾರವನ್ನೇ ಕಳೆದುಕೊಂಡಂತಾಗಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ವೈಶಾಖ ಶುದ್ಧ ತ್ರಯೋದಶಿಯ ದಿನವಾದ ಭಾನುವಾರ ಸಂಜೆ ರಥೋತ್ಸವಕ್ಕೆ ಧಾರ್ಮಿಕ ದತ್ತಿ ಇಲಾಖೆ ಮತ್ತು ಊರವರು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ರಥೋತ್ಸವ ಆರಂಭವಾಗುತ್ತಿದ್ದಂತೆಯೇ ರಥದ ಗಾಲಿಗೆ ಸನ್ನೆ ಹಾಕಿ ಬಿಡಿಸಿ ಕೊಡುವ ಕಲಸ ಮಾಡುತ್ತಿದ್ದ ರಾಮು, ಬಾಳೆಹಣ್ಣಿಗೆ ಮೆಟ್ಟಿ ಜಾರಿಬಿದ್ದರು. ಆಗ ಅವರ ಕಾಲಿನ ಮೇಲೆ ರಥದ ಗಾಲಿ ಹರಿಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೊಸ ಮನೆ ಕಟ್ಟಿಸಿದಾತ ಇಲ್ಲ: ರಥ ಕಟ್ಟುವುದನ್ನೇ ಮುಖ್ಯ ಕಸುಬನ್ನಾಗಿ ಮಾಡಿಕೊಂಡಿದ್ದ ರಾಮು, ಜಂಬುನಾಥ ಸಹಿತ ಸುತ್ತಮುತ್ತಲಿನ ಹಲವು ದೇವಾಲಯಗಳಲ್ಲಿ ರಥ ಕಟ್ಟುತ್ತಿದ್ದರು. ಬಡಗಿ ಕೆಲಸ ಬಿಟ್ಟು ಉಳಿದ ಕೆಲಸಗಳು ಅವರಿಗೆ ಗೊತ್ತಿರಲಿಲ್ಲ. ಹೀಗಾಗಿ ಅದರಲ್ಲೇ ಜೀವನ ಸಾಗಿಸುತ್ತ, ಅಮ್ಮನನ್ನು ಸಾಕುತ್ತಿದ್ದರು. ಚಿತ್ರಕೇರಿಯಲ್ಲಿ ಹಲವು ವರ್ಷಗಳಿಂದ ವಾಸವಾಗಿದ್ದ ಅವರು, ಈಚೆಗೆ ಪಾರ್ವತಿ ನಗರದಲ್ಲಿ ಹೊಸ ಮನೆ ಕಟ್ಟಿಸಿ ಅಲ್ಲಿ ವಾಸವಾಗಿದ್ದರು.
ಹೃದಯ ಹಿಂಡಿದ ಸ್ಥಿತಿ: ಶಾಸಕ ಎಚ್.ಆರ್.ಗವಿಯಪ್ಪ ಅವರು ಭಾನುವಾರ ರಾತ್ರಿ ರಾಮು ಮನೆಗೆ ಸಾಂತ್ವನ ಹೇಳಲು ತೆರಳಿದಾಗ ಅಮ್ಮನ ದುಃಖದ ಕಟ್ಟೆ ಒಡೆದು ಹೋಯಿತು. ‘ತನ್ನ ಜೀವನಕ್ಕೆ ಇದ್ದ ಒಬ್ಬ ಮಗ ಇನ್ನಿಲ್ಲ. ಇನ್ನು ಯಾರು ಗತಿ?’ ಎಂದು ಅವರು ಕಣ್ಣೀರಾದರು. ‘ನಿಮ್ಮ ಜತೆಗೆ ನಾವಿದ್ದೇವೆ’ ಎಂದು ಶಾಸಕರು ಸಾಂತ್ವನ ನುಡಿದರು.
ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಸಂಸ್ಕಾರಕ್ಕೆ ತಕ್ಷಣ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ಪರಿಹಾರ ಕೊಡಿಸುವ ಕುರಿತು ಪರಿಶೀಲನೆ ನಡೆಸುವ ಭರವಸೆ ನೀಡಿದರು. ಶಾಸಕರ ಜತೆಯಲ್ಲಿ ಆಡಿಟರ್ ಮೊಹಮ್ಮದ್, ಅಬ್ದುಲ್ ಜಲೀಲ್, ಗುರುದತ್, ಜಕಾತಿ ಲಿಂಗಪ್ಪ, ಅನಿಲ್ ಜೋಷಿ, ಹನೀಫ್ ಇದ್ದರು.
ಜಂಬುನಾಥ ರಥೋತ್ಸವದಲ್ಲಿ ಈಚಿನ ವರ್ಷಗಳಲ್ಲಿ ಇಂತಹ ಯಾವ ದುರಂತವೂ ಸಂಭವಿಸಿರಲಿಲ್ಲ ಎಂದು ಹಿರಿಯರೊಬ್ಬರು ಹೇಳಿದರು.
ರಥೋತ್ಸವದ ವೇಳೆ ಜೀವಹಾನಿ ಸಂಭವಿಸಬಾರದಿತ್ತು. ಮೃತರ ಕುಟುಂಬಕ್ಕೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದುಎಂ.ಎಸ್.ದಿವಾಕರ್ ಜಿಲ್ಲಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.