ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ | ಭಕ್ತಿಭಾವದಿಂದ ನಡೆದ ಜಂಬುನಾಥ ರಥೋತ್ಸವ; ಚಕ್ರ ಕಸಿಯಿತು ಜೀವ

Published 22 ಏಪ್ರಿಲ್ 2024, 6:33 IST
Last Updated 22 ಏಪ್ರಿಲ್ 2024, 6:33 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿಗೆ ಸಮೀಪದ ಜಂಬುನಾಥ ಗುಡ್ಡದ ಜಂಬುನಾಥೇಶ್ವರ ರಥೋತ್ಸವ ಭಾನುವಾರ ಸಂಜೆ ಭಕ್ತಿ ಭಾವದೊಂದಿಗೆ ನಡೆದರೂ, ರಥದ ಚಕ್ರದಡಿಗೆ ವ್ಯಕ್ತಿಯೊಬ್ಬರು ಸಿಲುಕಿ ಮೃತಪಟ್ಟ ಕಾರಣ ವೃದ್ಧೆಯೊಬ್ಬರು ಇನ್ನು ನಿತ್ಯ ಕಣ್ಣೀರಲ್ಲೇ ಕೈತೊಳೆಯಬೇಕಾದ ಸ್ಥಿತಿ ಎದುರಾಗಿದೆ.

ರಥ ಕಟ್ಟುವ ಕೆಲಸ ಮಾಡುತ್ತಿದ್ದ ಸಿ.ಕೆ.ರಾಮು (45) ಮೃತರು. ಅವಿವಾಹಿತರಾಗಿದ್ದ ಅವರು, ವೃದ್ಧ ತಾಯಿಗೆ ಆಸರೆಯಾಗಿದ್ದರು. ಅವರ ಸಾವಿನೊಂದಿಗೆ ತಾಯಿ ಇದೀಗ ಜೀವನಾಧಾರವನ್ನೇ ಕಳೆದುಕೊಂಡಂತಾಗಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ವೈಶಾಖ ಶುದ್ಧ ತ್ರಯೋದಶಿಯ ದಿನವಾದ ಭಾನುವಾರ ಸಂಜೆ ರಥೋತ್ಸವಕ್ಕೆ ಧಾರ್ಮಿಕ ದತ್ತಿ ಇಲಾಖೆ ಮತ್ತು ಊರವರು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ರಥೋತ್ಸವ ಆರಂಭವಾಗುತ್ತಿದ್ದಂತೆಯೇ ರಥದ ಗಾಲಿಗೆ ಸನ್ನೆ ಹಾಕಿ ಬಿಡಿಸಿ ಕೊಡುವ ಕಲಸ ಮಾಡುತ್ತಿದ್ದ ರಾಮು, ಬಾಳೆಹಣ್ಣಿಗೆ ಮೆಟ್ಟಿ ಜಾರಿಬಿದ್ದರು. ಆಗ ಅವರ ಕಾಲಿನ ಮೇಲೆ ರಥದ ಗಾಲಿ ಹರಿಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹೊಸ ಮನೆ ಕಟ್ಟಿಸಿದಾತ ಇಲ್ಲ: ರಥ ಕಟ್ಟುವುದನ್ನೇ ಮುಖ್ಯ ಕಸುಬನ್ನಾಗಿ ಮಾಡಿಕೊಂಡಿದ್ದ ರಾಮು,  ಜಂಬುನಾಥ ಸಹಿತ ಸುತ್ತಮುತ್ತಲಿನ ಹಲವು ದೇವಾಲಯಗಳಲ್ಲಿ ರಥ ಕಟ್ಟುತ್ತಿದ್ದರು. ಬಡಗಿ ಕೆಲಸ ಬಿಟ್ಟು ಉಳಿದ ಕೆಲಸಗಳು ಅವರಿಗೆ ಗೊತ್ತಿರಲಿಲ್ಲ. ಹೀಗಾಗಿ ಅದರಲ್ಲೇ ಜೀವನ ಸಾಗಿಸುತ್ತ, ಅಮ್ಮನನ್ನು ಸಾಕುತ್ತಿದ್ದರು. ಚಿತ್ರಕೇರಿಯಲ್ಲಿ ಹಲವು ವರ್ಷಗಳಿಂದ ವಾಸವಾಗಿದ್ದ ಅವರು, ಈಚೆಗೆ ಪಾರ್ವತಿ ನಗರದಲ್ಲಿ ಹೊಸ ಮನೆ ಕಟ್ಟಿಸಿ ಅಲ್ಲಿ ವಾಸವಾಗಿದ್ದರು.

ಹೃದಯ ಹಿಂಡಿದ ಸ್ಥಿತಿ: ಶಾಸಕ ಎಚ್‌.ಆರ್.ಗವಿಯಪ್ಪ ಅವರು ಭಾನುವಾರ ರಾತ್ರಿ ರಾಮು ಮನೆಗೆ ಸಾಂತ್ವನ ಹೇಳಲು ತೆರಳಿದಾಗ ಅಮ್ಮನ ದುಃಖದ ಕಟ್ಟೆ ಒಡೆದು ಹೋಯಿತು. ‘ತನ್ನ ಜೀವನಕ್ಕೆ ಇದ್ದ ಒಬ್ಬ ಮಗ ಇನ್ನಿಲ್ಲ. ಇನ್ನು ಯಾರು ಗತಿ?’ ಎಂದು ಅವರು ಕಣ್ಣೀರಾದರು. ‘ನಿಮ್ಮ ಜತೆಗೆ ನಾವಿದ್ದೇವೆ’ ಎಂದು ಶಾಸಕರು ಸಾಂತ್ವನ ನುಡಿದರು.

ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಸಂಸ್ಕಾರಕ್ಕೆ ತಕ್ಷಣ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ಪರಿಹಾರ ಕೊಡಿಸುವ ಕುರಿತು ಪರಿಶೀಲನೆ ನಡೆಸುವ ಭರವಸೆ ನೀಡಿದರು. ಶಾಸಕರ ಜತೆಯಲ್ಲಿ ಆಡಿಟರ್‌ ಮೊಹಮ್ಮದ್‌, ಅಬ್ದುಲ್ ಜಲೀಲ್‌, ಗುರುದತ್‌, ಜಕಾತಿ ಲಿಂಗಪ್ಪ, ಅನಿಲ್ ಜೋಷಿ, ಹನೀಫ್‌ ಇದ್ದರು.

ಜಂಬುನಾಥ ರಥೋತ್ಸವದಲ್ಲಿ ಈಚಿನ ವರ್ಷಗಳಲ್ಲಿ ಇಂತಹ ಯಾವ ದುರಂತವೂ ಸಂಭವಿಸಿರಲಿಲ್ಲ ಎಂದು ಹಿರಿಯರೊಬ್ಬರು ಹೇಳಿದರು.

ರಥೋತ್ಸವದ ವೇಳೆ ಜೀವಹಾನಿ ಸಂಭವಿಸಬಾರದಿತ್ತು. ಮೃತರ ಕುಟುಂಬಕ್ಕೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು
ಎಂ.ಎಸ್.ದಿವಾಕರ್‌ ಜಿಲ್ಲಾಧಿಕಾರಿ
ಬಾಳೆಹಣ್ಣಿಗೆ ಇನ್ನು ನಿಷೇಧ?
ರಥೋತ್ಸವದ ಸಂದರ್ಭದಲ್ಲಿ ರಥಕ್ಕೆ ಬಾಳೆಹಣ್ಣು ಉತ್ತತ್ತಿ ಎಸೆಯುವ ಸಂಪ್ರದಾಯ ಹಲವೆಡೆ ನಡೆಯುತ್ತ ಬಂದಿದೆ. ಆದರೆ ಇದೇ ಬಾಳೆಹಣ್ಣಿಗೆ ಮೆಟ್ಟಿ ಜಾರಿ ಬಿದ್ದು ಜನರ ಮೇಲೆ ರಥದ ಚಕ್ರ ಹರಿದುಹೋದ ಹಲವಾರು ವಿದ್ಯಮಾನಗಳು ರಾಜ್ಯದ ಹಲವೆಡೆ ನಡೆದಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ರಥಕ್ಕೆ ಬಾಳೆಹಣ್ಣು ಎಸೆಯುವುದನ್ನು ಸಂಪೂರ್ಣವಾಗಿ ನಿಷೇಧಿಸುವ ನಿಟ್ಟಿನಲ್ಲಿ ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ತಯಾರಿ ಎಂಬಂತೆ ಭಾನುವಾರ ಬೆಳಿಗ್ಗೆಯೇ ಜಂಬುನಾಥ ಗುಡ್ಡದಲ್ಲಿ ಬಾಳೆಹಣ್ಣು ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಹೀಗಿದ್ದರೂ ಭಕ್ತರು ತಂದ ಬಾಳೆಹಣ್ಣುಗಳು ಸಾಕಷ್ಟು ಇದ್ದ ಕಾರಣ ರಥಕ್ಕೆ ಬಾಳೆಹಣ್ಣು ಎಸೆಯುವ ಸಂಪ್ರದಾಯಕ್ಕೆ ಚ್ಯುತಿ ಬಂದಿರಲಿಲ್ಲ. ಆದರೆ ಅದುವೇ ಒಂದು ಜೀವ ಬಲಿ ತೆಗೆದುಕೊಂಡಿದೆ.
ಬೆಟ್ಟ ಹತ್ತಿ ಬರುವ ಸಾಹಸ
ಜಂಬುನಾಥ ದೇವಸ್ಥಾನ ಇರುವುದು ಬೆಟ್ಟದ ಮೇಲೆ. ಹೀಗಾಗಿ ಅಲ್ಲಿಗೆ ಸುಮಾರು 700 ಮೆಟ್ಟಿಲು ಹತ್ತಿ ಹೋಗಬೇಕು ಇಲ್ಲವೇ ಕಚ್ಚಾ ರಸ್ತೆಯಲ್ಲಿ ವಾಹನದಲ್ಲಿ ತೆರಳಬೇಕು. ರಾಜಾಪುರ ಮತ್ತು ಕಲ್ಲಳ್ಳಿ ಊರಿನ ಜನರು ರಸ್ತೆಯೇ ಇಲ್ಲದ ಬೆಟ್ಟದ ಹಾದಿಯಲ್ಲಿ ಬೆಟ್ಟ ಏರಿ ಈ ದೇವಸ್ಥಾನಕ್ಕೆ ಬಂದು ಉತ್ಸವದಲ್ಲಿ ಪಾಲ್ಗೊಳ್ಳುವುದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ರಥೋತ್ಸವಕ್ಕೆ ಬರುವ ಮಂದಿಗೆ ಮೊಸರನ್ನ ಉಪ್ಪಿನಕಾಯಿ ಪ್ರಸಾದ ರೂಪದಲ್ಲಿ ನೀಡುವುದು ಇಲ್ಲಿ ನಡೆಯುತ್ತ ಬಂದಿದೆ. ಭಾನುವಾರ ಬಳ್ಳಾರಿ ರಸ್ತೆಯ ಲಕ್ಷ್ಮೀ ಸ್ಟೀಲ್ಸ್‌ ಸಂಸ್ಥೆಯವರು ಕೆಂಚ ಲಕ್ಷ್ಮೀದೇವಿ ಅವರ ನೆನಪಿನಲ್ಲಿ ಇಡೀ ದಿನ ಅನ್ನಸಂತರ್ಪಣೆ ಸೇವೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT